ADVERTISEMENT

ಏರ್ ಇಂಡಿಯಾ ಒಕ್ಕೂಟಗಳ ಸಭೆ ಕರೆದ ವಿಮಾನಯಾನ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 17 ಮೇ 2012, 8:45 IST
Last Updated 17 ಮೇ 2012, 8:45 IST

ನವದೆಹಲಿ (ಪಿಟಿಐ): ಏರ್ ಇಂಡಿಯಾ ಪೈಲಟ್‌ಗಳ ಮುಷ್ಕರವು ಗುರುವಾರ ಹತ್ತನೇಯ ದಿನಕ್ಕೆ ಕಾಲಿಟ್ಟಿರುವ ಮಧ್ಯೆ ನಾಗರಿಕ ವಿಮಾನಯಾನ ಸಚಿವಾಲಯವು ಮುಂದಿನ ವಾರ ಏರ್ ಇಂಡಿಯಾ ಮಾನ್ಯತೆ ಪಡೆದಿರುವ ಎಲ್ಲ ಒಕ್ಕೂಟಗಳ ಸಭೆ ಕರೆದಿದೆ.

`ಸಿಬ್ಬಂದಿಗಳ ವೇತನ, ಬಡ್ತಿ ಒಳಗೊಂಡಂತೆ ಏರ್ ಇಂಡಿಯಾದ ಪ್ರಗತಿ ಕುರಿತಂತೆ ಚರ್ಚಿಸಲು ನಾನು ಮಾನ್ಯತೆ ಪಡೆದಿರುವ ಎಲ್ಲ ಒಕ್ಕೂಟಗಳ ಸಭೆ ಕರೆದಿದ್ದೇನೆ~ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ತಿಳಿಸಿದರು.

ಸಭೆಯಲ್ಲಿ ಕಾರ್ಮಿಕರ ಸಮಸ್ಯೆ, ಏರ್ ಇಂಡಿಯಾ ವಿಲೀನ ಪ್ರಕ್ರಿಯೆಯ ನಂತರ ಸಿಬ್ಬಂದಿಗಳಿಗಾಗಿರುವ ಸಮಸ್ಯೆ, ಸಂಬಳ ವಿಷಯಗಳನ್ನು ಒಳಗೊಂಡಂತೆ ಸಂಸ್ಥೆಯ ಪ್ರಗತಿ ಕುರಿತಂತೆ ಚರ್ಚಿಸುವ ನಿರೀಕ್ಷೆಯಿದೆ.

ಏರ್ ಇಂಡಿಯಾ ವಿಲೀನ ಪ್ರಕ್ರಿಯೆಯ ನಂತರ ಮಾನವ ಸಂಪನ್ಮೂಲ ಏಕೀಕರಣ ವಿಷಯ ಕುರಿತಂತೆ ಧರ್ಮಾಧಿಕಾರಿ ಸಮೀತಿ ಮಾಡಿರುವ ಹಲವು ಶಿಫಾರಸುಗಳನ್ನು ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ.

ಇದೇ ವಿಷಯಗಳನ್ನು ಮುಂದಿಟ್ಟುಕೊಂಡು ಪೈಲಟ್‌ಗಳು ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ಸಂಸ್ಥೆಯು ಇತ್ತೀಚಿಗಷ್ಟೇ ಭಾರತೀಯ ಪೈಲಟ್ಸ್ ಗಿಲ್ಡ್ (ಐಪಿಜಿ) ಮಾನ್ಯತೆಯನ್ನು ರದ್ದುಗೊಳಿಸಿತ್ತು.  ಆದ್ದರಿಂದ ಸಭೆಯಲ್ಲಿ ಐಪಿಜಿ  ಭಾಗವಹಿಸುವ ಸಾಧ್ಯತೆ ಇಲ್ಲ.

ಬಿಕ್ಕಟ್ಟು ಬಗೆಹರಿಸುವ ಕುರಿತಂತೆ ಸಚಿವ ಅಜಿತ್ ಸಿಂಗ್ ಮುಷ್ಕರ ನಿರತ ಪೈಲಟ್‌ಗಳ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳುವುದಿಲ್ಲ ಎಂದು ಪೈಲಟ್‌ಗಳನ್ನು ಮಾತುಕತೆಗೆ ಆಹ್ವಾನಿಸಿದರೆ, ಸೇವೆಯಿಂದ ವಜಾಗೊಳಿಸಿರುವ 71 ಸಹದ್ಯೋಗಿಗಳ ವಿರುದ್ಧದ ಕ್ರಮವನ್ನು ಹಿಂತೆಗೆದುಕೊಳ್ಳುವಂತೆ ಪೈಲಟ್‌ಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.