
ನವದೆಹಲಿ(ಪಿಟಿಐ): ಐಎಸ್ ಉಗ್ರ ಸಂಘಟನೆಗೆ ಯುವಕರು ಸೇರ್ಪಡೆ ಆಗುತ್ತಿರುವ ವಿಷಯ ಕುರಿತು ಚರ್ಚಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ಕೇಂದ್ರ ಗುಪ್ತ ದಳ, ತನಿಖಾ ಸಂಸ್ಥೆಗಳು ಹಾಗೂ ಕರ್ನಾಟಕ ಸೇರಿದಂತೆ 13 ರಾಜ್ಯಗಳ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗ ಸಭೆ ನಡೆಸಿದ್ದಾರೆ.
ಭಾರತದ ಕೆಲ ಯುವಕರು ಐಎಸ್ ಉಗ್ರ ಸಂಘಟನೆ ಸೆಳೆತಕ್ಕೊಳಗಾಗಿ ಸೇರ್ಪಡೆಗೊಳ್ಳುತ್ತಿದ್ದಾರೆ. ಈ ದೊಡ್ಡ ಸವಾಲನ್ನು ನಿರ್ವಹಿಸುವ ಬಗ್ಗೆ ಮತ್ತು ಪ್ರಸ್ತುತ ಪರಿಸ್ಥಿತಿಯ ಪರಾಮರ್ಶೆ ನಡೆಸಲು ರಾಜನಾಥ್ ಅವರು ಸುದೀರ್ಘ ಸಭೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಸಾಮಾಜಿಕ ಜಾಲತಾಣಗಳ ದುರ್ಬಳಕೆ ಸೇರಿದಂತೆ ಸಂಘಟನೆಯತ್ತ ಜನರನ್ನು ಸೆಳೆಯಲು ನೀಡುತ್ತಿರುವ ಪ್ರಚೋದನೆ, ಅದರಲ್ಲೂ ವಿಶೇಷವಾಗಿ ಭಾರತೀಯ ಯುವಕರನ್ನು ಪ್ರಚೋದಿಸುತ್ತಿರುವ ಬಗ್ಗೆ ಹಾಗೂ ಅದರ ತಡೆಗೆ ತೆಗೆದುಕೊಳ್ಳಬಹುದಾದ ಕಾನೂನು ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಸಭೆಯಲ್ಲಿ ಕೇಂದ್ರಾಡಳಿತ ಪ್ರದೇಶಗಳ ಹಾಗೂ ಉತ್ತರ ಪ್ರದೇಶ, ಕೇರಳ, ಜಮ್ಮು ಮತ್ತು ಕಾಶ್ಮೀರ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಕರ್ನಾಟಕ, ಮಧ್ಯಪ್ರದೇಶ, ದೆಹಲಿ ಹಾಗೂ ಮಹಾರಾಷ್ಟ್ರ ರಾಜ್ಯಗಳ ಅಧಿಕಾರಿಗಳು ಭಾಗವಹಿಸಿದ್ದರು.
ಗುಪ್ತ ದಳದ ಮಾಹಿತಿ ಪ್ರಕಾರ, 23 ಭಾರತೀಯರು ಐಎಸ್ ಸಂಘಟನೆ ಸೇರಿದ್ದಾರೆ. ಅದರಲ್ಲಿ ಆರು ಜನ ವಿವಿಧ ಘಟನೆಗಳಲ್ಲಿ ಸಾವಿಗೀಡಾಗಿದ್ದಾರೆ. 150 ಭಾರತೀಯರು ಆನ್ಲೈನ್ ಮೂಲಕ ಐಎಸ್ ಜತೆಗೆ ಸಂಪರ್ಕ ಹೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.