ರಾಯಪುರ (ಐಎಎನ್ಎಸ್): ಮಾವೊವಾದಿಗಳು ನಡೆಸಿದ ಗುಂಡಿನ ದಾಳಿಯಿಂದ ಮುಖ್ಯ ಪೇದೆ ಸೇರಿದಂತೆ ಐವರು ಪೊಲೀಸರು ಮೃತಪಟ್ಟಿರುವ ಘಟನೆ ಛತ್ತೀಸ್ಗಡದ ಬಸ್ತಾರ್ ಅರಣ್ಯ ಪ್ರದೇಶದಲ್ಲಿ ಗುರುವಾರ ನಡೆದಿದೆ.
`ನಾರಾಯಣಪುರ ಜಿಲ್ಲೆಯ ಝಾರಾ ಘಾಟಿ ಅರಣ್ಯ ಭಾಗದಲ್ಲಿರುವ ರಾಜ್ಯ ಸಶಸ್ತ್ರ ಸೇನಾ ಪಡೆಯ ಗುಂಪೊಂದರ ಮೇಲೆ ಬೆಳಿಗ್ಗೆ ಎರಗಿದ ಮಾವೊ ವಾದಿಗಳು, ಮನಬಂದಂತೆ ಗುಂಡಿನ ಸುರಿಮಳೆಗರೆದರು. ಬಳಿಕ ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಪರಾರಿಯಾದರು~ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಮ್ ನಿವಾಸ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಮೀಪದಲ್ಲೇ ಪಡೆಯ ಮೂಲ ಶಿಬಿರ ಇದ್ದು, ಅಲ್ಲಿಂದ ಹೆಚ್ಚುವರಿ ಪೊಲೀಸರು ಬರುವ ವೇಳೆ ಗಾಗಲೇ ಬಂಡುಕೋರರು ಸಮೀ ಪದ ಅರಣ್ಯದೊಳಗೆ ಪರಾರಿಯಾಗಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ. ಹತ್ತಕ್ಕೂ ಹೆಚ್ಚು ಜನರಿದ್ದ ತಂಡ ಈ ದಾಳಿ ನಡೆಸಿದೆ.
ಮಾವೊವಾದಿಗಳ ವಿರುದ್ಧ ಉಗ್ರ ಕಾರ್ಯಾಚರಣೆ ನಡೆಸುವ ಸಲುವಾಗಿ ಇತ್ತೀಚೆಗಷ್ಟೇ ಈ ಪ್ರದೇಶದಲ್ಲಿ ಸಶಸ್ತ್ರ ಸೇನಾ ಶಿಬಿರ ಸ್ಥಾಪಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.