ADVERTISEMENT

ಒಂಬತ್ತು ವಿದ್ಯಾರ್ಥಿಗಳಿಂದ ಗೆಳೆಯನ ಕೊಲೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 15:50 IST
Last Updated 14 ಮಾರ್ಚ್ 2011, 15:50 IST

ನವದೆಹಲಿ (ಪಿಟಿಐ): ತಾನು ಕೊಟ್ಟಿದ್ದ 2,500 ರೂಪಾಯಿ ಸಾಲ ಹಿಂತಿರುಗಿಸುವಂತೆ ಕೇಳಿದ ಹದಿಹರೆಯದ ಗೆಳೆಯನನ್ನು ಒಂಬತ್ತು ವಿದ್ಯಾರ್ಥಿಗಳು ಸೇರಿ ಕೊಂದಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.

ಇಲ್ಲಿನ ಶ್ರೀನಿವಾಸಪುರಿಯ ಕೇಂಬ್ರಿಜ್ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಯಶ್ ಕೊಲೆಗೀಡಾದ ದುರ್ದೈವಿ. ಮುಂದೆ ನಡೆಯಲಿರುವ ಸಿಬಿಎಸ್‌ಇ ಪರೀಕ್ಷೆ ಹಿನ್ನೆಲೆಯಲ್ಲಿ ಗೆಳೆಯರು ಜಂಟಿ ಪರೀಕ್ಷಾ ಸಿದ್ಧತೆಗೆ ತೆರಳುವ ವೇಳೆ ಈ ಘಟನೆ ನಡೆದಿದೆ. ಯಶ್ ಮನೆಯಿಂದ 100 ಮೀಟರ್ ದೂರದಲ್ಲಿ ಈ ಕೃತ್ಯ ನಡೆದಿದೆ.ಬಾಲಕನ ತಂದೆ ಮನಮೋಹನ್ ಗುಪ್ತಾ ಸದರ್ ಮಾರುಕಟ್ಟೆಯಲ್ಲಿ ಕಸೂತಿ ಅಂಗಡಿ ನಡೆಸುತ್ತಿದ್ದಾರೆ.

‘ಎಲ್ಲ ವಿದ್ಯಾರ್ಥಿಗಳು ಒಂದೇ ಶಾಲೆಯಲ್ಲಿ ಓದುತ್ತಿರಲಿಲ್ಲ. ಆದರೆ, ಒಂದೇ ಬಡಾವಣೆಯಲ್ಲಿ ವಾಸಿಸುತ್ತಿದ್ದರಿಂದ ಪರಸ್ಪರ ಒಬ್ಬರಿಗೊಬ್ಬರ ಪರಿಚಯ ಇತ್ತು. ಒಂಬತ್ತು ವಿದ್ಯಾರ್ಥಿಗಳ ವಿಚಾರಣೆ ನಡೆಸಿದ ಬಳಿಕ ಕೊಲೆಯ ವಿಷಯ ತಿಳಿಯಿತು’ ಎಂದು ಆಗ್ನೇಯ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ವೀರೇಂದ್ರ ಚಹಾಲ್ ತಿಳಿಸಿದ್ದಾರೆ.

ಒಂಬತ್ತು ಜನರ ಪೈಕಿ ಒಬ್ಬ ವಿದ್ಯಾರ್ಥಿ ಕಳೆದ ಡಿಸೆಂಬರ್‌ನಲ್ಲಿ ಯಶ್‌ನಿಂದ 2,500 ರೂಪಾಯಿ ಸಾಲ ತೆಗೆದುಕೊಂಡಿದ್ದ. ಮರಳಿ ಹಣ ನೀಡುವಂತೆ ಕೇಳಿದರೆ ಆತ ನಿರಾಕರಿಸುತ್ತಿದ್ದಾನೆಂದು ಯಶ್ ತನ್ನ ತಂದೆಗೆ ಹೇಳಿದ್ದ ಎಂದು ಚಹಾಲ್ ಹೇಳಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಒಂಬತ್ತರಿಂದ 12ನೇ ತರಗತಿಯಲ್ಲಿ ಅಭ್ಯಸಿಸುತ್ತಿದ್ದು, ಯಾರೊಬ್ಬರು ಅಪರಾಧ ಹಿನ್ನೆಲೆ ಹೊಂದಿಲ್ಲ. ಸಾಲ ಪಡೆದ ವಿದ್ಯಾರ್ಥಿ ತನ್ನ ಇತರೆ ಗೆಳೆಯರೊಂದಿಗೆ ಸೇರಿ ಕೊಲೆಗೆ ಯೋಜನೆ ರೂಪಿಸಿದ್ದ ಎನ್ನಲಾಗಿದೆ.

ಪರೀಕ್ಷಾ ಸಿದ್ಧತೆಗಾಗಿ ಗೆಳೆಯರು ಯಶ್‌ನನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾರೆ. ದಾರಿ ಮಧ್ಯೆ ಆತನನ್ನು ಮನಬಂದಂತೆ ಥಳಿಸಿದ್ದಾರೆ. ಪರಸ್ಪರ ತಳ್ಳಾಟದ ಸಂದರ್ಭದ ನಡುವೆಯೇ ಯಶ್ ಬೆನ್ನಿಗೆ ಇರಿದು ಅಲ್ಲಿಂದ ಓಡಿ ಹೋಗಿದ್ದಾರೆ. ಗಾಯಗೊಂಡು ರಸ್ತೆ ಮೇಲೆ ನರಳಾಡುತ್ತಿದ್ದ ಆತ ತನ್ನ ಗೆಳೆಯನಿಗೆ ಮೊಬೈಲ್‌ನಿಂದ ಕರೆ ಮಾಡಿ ಘಟನೆಯ ಬಗ್ಗೆ ವಿವರಿಸಿದ್ದಾನೆ. ಕೂಡಲೇ ಆತ ಯಶ್ ಪೋಷಕರ ಮನೆಗೆ ತೆರಳಿ ವಿಷಯ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡು ಏಮ್ಸ್‌ನ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಶ್ ರಾತ್ರಿ 9.30ಕ್ಕೆ ಕೊನೆಯುಸಿರೆಳೆದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಲ ಪಡೆದಿದ್ದ ಗೆಳೆಯ ತನ್ನ ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಹ್ವಾನಿಸಲು ಎರಡು ದಿನಗಳ ಹಿಂದೆಯಷ್ಟೇ ಯಶ್ ಮನೆಗೆ ಹೋಗಿದ್ದ. ಯಶ್ ಕುಟುಂಬದವರು ಎರಡು ವರ್ಷಗಳ ಹಿಂದೆ ಶ್ರೀನಿವಾಸಪುರಿ ಬಡಾವಣೆಗೆ ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.