ADVERTISEMENT

ಒಡಿಶಾ: ಉಕ್ಕೇರಿದ ಪ್ರವಾಹ, 2600 ಗ್ರಾಮಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 9:55 IST
Last Updated 11 ಸೆಪ್ಟೆಂಬರ್ 2011, 9:55 IST

ಭುವನೇಶ್ವರ (ಪಿಟಿಐ): ಉಕ್ಕಿ ಹರಿಯುತ್ತಿರುವ ಮಹಾನದಿ ಮತ್ತು ಇತರ ನದಿಗಳು ಒಡಿಶಾ ರಾಜ್ಯದ 19 ಜಿಲ್ಲೆಗಳ 2600 ಗ್ರಾಮಗಳನ್ನು ಮುಳುಗಿಸಿವೆ. ಎಂಟು ಮಂದಿ ಪ್ರವಾಹಕ್ಕೆ ಬಲಿಯಾಗಿದ್ದು ಸರ್ಕಾರವು ತುರ್ತು ಪರಿಹಾರ ಹಾಗೂ ನಿರ್ವಸಿತರಾಗಿರುವ 11 ಲಕ್ಷ ಮಂದಿಯ ರಕ್ಷಣಾ ಕಾರ್ಯಾಚಾರಣೆಯನ್ನು ತೀವ್ರಗೊಳಿಸಿದೆ.

 ಈವರೆಗೆ ಮೂವರು ಕಣ್ಮರೆಯಾಗಿದ್ದು, ಪುರಿ, ಕೇಂದ್ರಪಾಡ, ಕಟಕ್,ಜಗತ್ ಸಿಂಗ್ ಪುರ, ಸಂಬಲ್ ಪುರ, ಬೌಧ್ ಮತ್ತು ಸೋನೆಪುರ ಜಿಲ್ಲೆಗಳಲ್ಲಿ ರಸ್ತೆ ಸಂಪರ್ಕ ಕಡಿದುಹೋಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ತಗ್ಗು ಪ್ರದೇಶಗಳು ನೀರಿನಡಿ ಮುಳುಗಿದ್ದು ಸುಮಾರು 61,000 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಘಿದೆ. 19 ಜಿಲ್ಲೆಗಳ 2600 ಗ್ರಾಮಗಳ 11 ಲಕ್ಷ ಮಂದಿಗೆ ಪರಿಹಾರ ಒದಗಿಸುವ ಕಾರ್ಯವನ್ನು ಸರ್ಕಾರ ತ್ವರಿತಗೊಳಿಸಿದೆ.

ಮಹಾನದಿಯಲ್ಲಿ 13.66 ಲಕ್ಷ ಕ್ಯೂಸೆಕ್ ನಷ್ಟು ಪ್ರವಾಹದ ನೀರು ಹಿರಿದ ಪರಿಣಾಮವಾಗಿ ಕಟಕ್ ಬಳಿಯ ಮುಂಡಲಿಯಲ್ಲಿ ಜನಸಂಖ್ಯೆ ಹೆಚ್ಚಿರುವ ನದಿಮುಖಜ ಭೂಮಿಯ ದಂಡೆಯಲ್ಲಿ ಬಿರುಕುಗಳು ಉಂಟಾಗಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.