ADVERTISEMENT

ಒಡಿಶಾ ಪ್ರವಾಹ: ಪರಿಹಾರ ಕಾರ್ಯ ತೀವ್ರ ಚುರುಕು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2011, 19:30 IST
Last Updated 27 ಸೆಪ್ಟೆಂಬರ್ 2011, 19:30 IST
ಒಡಿಶಾ ಪ್ರವಾಹ: ಪರಿಹಾರ ಕಾರ್ಯ ತೀವ್ರ ಚುರುಕು
ಒಡಿಶಾ ಪ್ರವಾಹ: ಪರಿಹಾರ ಕಾರ್ಯ ತೀವ್ರ ಚುರುಕು   

ಭುವನೇಶ್ವರ (ಪಿಟಿಐ): ಒಡಿಶಾದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು ಮಂಗಳವಾರ ಮತ್ತೆ ಏಳು ಜನರು ಮೃತಪಟ್ಟಿದ್ದಾರೆ. ಆ ಮೂಲಕ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 27ಕ್ಕೆ ಏರಿದೆ.

ಈ ಮಧ್ಯೆ, ನೆರೆಯಿಂದಾಗಿ ಜಲಾವೃತವಾಗಿರುವ ಸುಮಾರು 1,100 ಗ್ರಾಮಗಳಲ್ಲಿ ರಾಜ್ಯ ಸರ್ಕಾರ ಪರಿಹಾರ ಕಾರ್ಯವನ್ನು ತೀವ್ರಗೊಳಿಸಿದೆ.

ಮೃತರ ಸಂಖ್ಯೆ 27ಕ್ಕೆಏರಿದೆ ಎಂದು  ವಿಶೇಷ ಪರಿಹಾರ ಆಯುಕ್ತ ಪಿ.ಕೆ.ಮೊಹಾಪಾತ್ರ ಹೇಳಿದ್ದಾರೆ.
ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಎಸ್.ಎನ್ ಪಾಟ್ರೊ ಅವರು ಅಧಿಕಾರಿಗಳ ಸಭೆ ನಡೆಸಿ ಪ್ರವಾಹ ಪರಿಸ್ಥಿತಿ ಬಗ್ಗೆ ಚರ್ಚಿಸಿದರು.

ಪ್ರವಾಹದಿಂದಾಗಿ ಜಾಜ್‌ಪುರ ಜಿಲ್ಲೆಯಲ್ಲಿ ಹೆಚ್ಚು ಅಂದರೆ ಏಳು ಜನರು   ಮೃತಪಟ್ಟಿದ್ದಾರೆ. ಭದ್ರಕ್ ಜಿಲ್ಲೆಯಲ್ಲಿ ಆರು ಮಂದಿ ಅಸು ನೀಗಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.

ಬ್ರಹ್ಮಣಿ, ಬೈತರಾಣಿ, ಸುವರ್ಣರೇಖಾ, ಬುಧಬುಲಂಗ್ ನದಿಗಳು ಹಾಗೂ ಅದರ ಉಪನದಿಗಳು ಉಕ್ಕಿ ಹರಿಯುತ್ತಿರುವುದರಿಂದಾಗಿ  ಸೃಷ್ಟಿಯಾಗಿರುವ ಪ್ರವಾಹದಿಂದ ಸುಮಾರು 22 ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತರಾಗಿದ್ದಾರೆ. ಈ ವರ್ಷದಲ್ಲಿ ಮೊದಲ ಬಾರಿ ಮಹಾನಂದಿ ನದಿ ಯಿಂದಾಗಿ ಉಂಟಾಗಿದ್ದ ನೆರೆಯಿಂದಾಗಿ 41 ಜನರು ಮೃತಪಟ್ಟಿದ್ದರು ಎಂದು ಮೊಹಾಪಾತ್ರ ಹೇಳಿದ್ದಾರೆ.

ಈ ಮಧ್ಯೆ, ಬ್ರಹ್ಮಣಿ ಮತ್ತಿತರ ನದಿಗಳಲ್ಲಿ ನೀರಿನ ಮಟ್ಟ ಇಳಿಮುಖವಾಗಿದ್ದು, ನೆರೆ ಪೀಡಿತ ರಾಜ್ಯ ಸರ್ಕಾರ ಪರಿಹಾರ ಕಾರ್ಯವನ್ನು ಮತ್ತಷ್ಟು ತೀವ್ರ ಗೊಳಿಸಿದೆ.

ಪ್ರವಾಹ ಪೀಡಿತ ಪ್ರದೇಶಗಳಾದ ಸಂಬಲ್‌ಪುರ ಮತ್ತುಸುವರ್ಣಪುರಕ್ಕೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರವಾಹ ಸ್ಥಿತಿ ಸಂಪೂರ್ಣವಾಗಿ ಇಳಿಮುಖವಾಗುವವರೆಗೂ ಸಂತ್ರಸ್ತರಿಗೆ  ಬೇಯಿಸಿದ ಆಹಾರವನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.