ADVERTISEMENT

ಓಂ ಪ್ರಕಾಶ್ ಚೌತಾಲಾ ಸೇರಿದಂತೆ 53 ಜನರ ಬಂಧನ

3000 ಶಿಕ್ಷಕರ ಅಕ್ರಮ ನೇಮಕಾತಿ ಹಗರಣ

​ಪ್ರಜಾವಾಣಿ ವಾರ್ತೆ
Published 16 ಜನವರಿ 2013, 11:32 IST
Last Updated 16 ಜನವರಿ 2013, 11:32 IST
ಓಂ ಪ್ರಕಾಶ್ ಚೌತಾಲಾ ಅವರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿದ ನಂತರ ಜೈಲಿಗೆ ಕರೆದ್ಯೊಯುತ್ತಿರುವುದು. ಪಿಟಿಐ ಚಿತ್ರ.
ಓಂ ಪ್ರಕಾಶ್ ಚೌತಾಲಾ ಅವರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿದ ನಂತರ ಜೈಲಿಗೆ ಕರೆದ್ಯೊಯುತ್ತಿರುವುದು. ಪಿಟಿಐ ಚಿತ್ರ.   

ನವದೆಹಲಿ (ಪಿಟಿಐ): 3000 ಪ್ರಾಥಮಿಕ ಶಾಲೆ ಶಿಕ್ಷಕರ ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ ಸೇರಿದಂತೆ 53 ಜನರನ್ನು ತಪ್ಪಿತಸ್ಥರೆಂದು ಬುಧವಾರ ಸಿಬಿಐ ನ್ಯಾಯಾಲಯ ಹೇಳಿದ ಬೆನ್ನಲ್ಲೇ ಚೌತಾಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ನೇಮಕಾತಿ ಹಗರಣ ಆರೋಪ ಎದುರಿಸುತ್ತಿರುವ ಓಂ ಪ್ರಕಾಶ್ ಹಾಗೂ ಅವರ ಮಗ ಶಾಸಕ ಅಜಯ್ ಚೌತಾಲಾ ಸೇರಿದಂತೆ 53 ಜನರ ವಿಚಾರಣೆಯನ್ನು ಮಂಗಳವಾರ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯವು ಪೂರ್ಣಗೊಳಿಸಿತ್ತು. ಬುಧವಾರ ವಿಶೇಷ ಸಿಬಿಐ ನ್ಯಾಯಾಧೀಶ ವಿನೋದ ಕುಮಾರ್ ಅವರು ಈ 53 ಜನರು ತಪ್ಪಿತಸ್ಥರೆಂದು ಘೋಷಿಸುತ್ತಿದ್ದಂತೆ ಅವರೆಲ್ಲರನ್ನೂ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದರು.

ಇದೇ ವೇಳೆ ನ್ಯಾಯಾಲಯವು ಶಿಕ್ಷೆ ಕುರಿತಾದ ವಿಚಾರಣೆಯನ್ನು ಜನವರಿ 17, 19 ಹಾಗೂ 21ಕ್ಕೆ ನಿಗದಿಪಡಿಸಿದೆ.

ಓಂ ಪ್ರಕಾಶ್ ಹಾಗೂ ಅವರ ಮಗ ಶಾಸಕ ಅಜಯ್ ಚೌತಾಲಾ ಸೇರಿದಂತೆ ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಸಂಜೀವ ಕುಮಾರ್, ಚೌತಾಲಾ ಅವರ ಮಾಜಿ ವಿಶೇಷ ಕರ್ತವ್ಯಾಧಿಕಾರಿ ವಿದ್ಯಾಧರ್ ಹಾಗೂ ರಾಜಕೀಯ ಸಲಹೆಗಾರ ಶೇರ್ ಸಿಂಗ್ ಬದ್‌ಶಮಿ ಅವರು ಪ್ರಕರಣದ ಪ್ರಮುಖ ತಪ್ಪಿತಸ್ಥರಾಗಿದ್ದಾರೆ.

ಆರೋಪಿಗಳೆಲ್ಲರ ವಿರುದ್ಧ ಐಪಿಸಿ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೇಕ್ಷನ್ 120-ಬಿ (ಅಪರಾಧಿಕ ಸಂಚು), 420 (ವಂಚನೆ), 467 (ನಕಲಿ ದಾಖಲೆ ಸೃಷ್ಟಿ), 468 (ವಂಚನೆಗಾಗಿ ನಕಲಿ ದಾಖಲೆ ಸೃಷ್ಟಿ), ಹಾಗೂ 471(ಅಸಲಿ ದಾಖಲೆಗಳಂತೆ ನಕಲಿ ದಾಖಲೆಗಳ ಬಳಕೆ) ಅಡಿಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.