ಹಿಂಡನ್ (ಉತ್ತರ ಪ್ರದೇಶ): ‘ಅತ್ಯಂತ ಕಡಿಮೆ ಅವಧಿಯಲ್ಲೂ ಭಾರತೀಯ ವಾಯುಪಡೆ ಯುದ್ಧಕ್ಕೆ ಸನ್ನದ್ಧವಾಗಲಿದೆ’ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋಆ ತಿಳಿಸಿದ್ದಾರೆ.
ಇಲ್ಲಿನ ವಾಯು ನೆಲೆಯಲ್ಲಿ ನಡೆದ ಭಾರತೀಯ ವಾಯುಪಡೆಯ 85ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ‘ದೇಶದ ಭದ್ರತೆಗೆ ಎದುರಾಗುವ ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ವಾಯುಪಡೆ ಸಜ್ಜಾಗಿದೆ. ವಿವಿಧ ರೀತಿಯ ಕಾರ್ಯಾಚರಣೆಗಳ ಮೂಲಕ ಶತ್ರುಗಳನ್ನು ಹಿಮ್ಮೆಟ್ಟಿಸುತ್ತೇವೆ. ವಾಯುಪಡೆ ಯೋಧರು ಎಲ್ಲ ರೀತಿಯ ಪರಿಸ್ಥಿತಿ ಎದುರಿಸಲು ಸದಾ ಸನ್ನದ್ಧರಾಗಿದ್ದಾರೆ’ ಎಂದು ಭರವಸೆ ನೀಡಿದರು.
‘ಪ್ರಸ್ತುತ ಭೌಗೋಳಿಕ ಮತ್ತು ರಾಜಕೀಯ ವಾತಾವರಣ ಅನಿಶ್ಚಿತತೆಯಿಂದ ಕೂಡಿದೆ. ಹೀಗಾಗಿ, ವಾಯುಪಡೆ ಕಡಿಮೆ ಅವಧಿಯಲ್ಲಿ ತಕ್ಷಣದ ಯುದ್ಧವನ್ನು ಎದುರಿಸುವ ಸನ್ನಿವೇಶವೂ ಸೃಷ್ಟಿಯಾಗಬಹುದು. ಇದಕ್ಕಾಗಿ ಸದಾ ವಾಯು ಪಡೆ ಸಿದ್ಧವಾಗಿರುವುದು ಅನಿವಾರ್ಯವಾಗಿದೆ’ ಎಂದು ತಿಳಿಸಿದರು.
ದೋಕಲಾ ಪ್ರದೇಶದಲ್ಲಿನ ಬಿಕ್ಕಟ್ಟು ಮತ್ತು ಜಮ್ಮು–ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಭಯೋತ್ಪಾದನೆ ಚಟುವಟಿಕೆಗಳಿಗೆ ನೀಡುತ್ತಿರುವ ಬೆಂಬಲವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಅವರು ಈ ಹೇಳಿಕೆ ನೀಡಿದ್ದಾರೆ.
‘ದೇಶದ ರಕ್ಷಣಾ ಸಾಮರ್ಥ್ಯ ಮತ್ತಷ್ಟು ಬಲವರ್ಧನೆಗೊಳಿಸಲು ವಾಯುಪಡೆ, ಸೇನೆ ಮತ್ತು ನೌಕಾ ಪಡೆಗಳು ಜಂಟಿಯಾಗಿ ಯೋಜನೆಗಳನ್ನು ಕೈಗೊಳ್ಳ
ಬೇಕು. ಜಂಟಿ ಯೋಜನೆ ಮತ್ತು ಕಾರ್ಯಾಚರಣೆ ಮೂಲಕ ಪರಿಣಾಮಕಾರಿ ಫಲಿತಾಂಶ ಪಡೆದುಕೊಳ್ಳಬಹುದು’ ಎಂದು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.