ಜಮ್ಮು (ಪಿಟಿಐ): ಪಾಕಿಸ್ತಾನದ ಪಡೆಗಳು ಗಡಿ ನಿಯಂತ್ರಣ ರೇಖೆಗುಂಟ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಬಳಿ ಸೋಮವಾರ ರಾತ್ರಿ ಭಾರತೀಯ ಯೋಧರ ಶಿಬಿರಗಳ ಮೇಲೆ ಗುಂಡಿನ ದಾಳಿ ನಡೆಸಿವೆ.
ಕಳೆದ ನಾಲ್ಕು ದಿನಗಳಲ್ಲಿ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ನಡೆಸಿದ ದಾಳಿಗಳಲ್ಲಿ ಇದು ಎರಡನೆಯದಾಗಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಸೇನೆ ಮೂಲಗಳು ತಿಳಿಸಿವೆ. ಪೂಂಚ್ ಜಿಲ್ಲೆಯ ಕೃಷ್ಣಾಘಟಿ ಉಪವಲಯದ ವ್ಯಾಪ್ತಿಯ ನಂಗಿ ತಿಕ್ರಿ ಪ್ರದೇಶದಲ್ಲಿದ್ದ ಭಾರತದ ಶಿಬಿರಗಳ ಮೇಲೆ ಕಳೆದ ರಾತ್ರಿ ಪಾಕ್ ಪಡೆಗಳು ಸಣ್ಣ ಪ್ರಮಾಣದ ಗುಂಡಿನ ದಾಳಿ ನಡೆಸಿವೆ. ಆದರೆ, ಇದಕ್ಕೆ ಭಾರತದ ಪಡೆಗಳು ಪ್ರತಿದಾಳಿ ನಡೆಸಲಿಲ್ಲ ಎಂದು ರಕ್ಷಣಾ ಇಲಾಖೆ ಸಾರ್ವಜನಿಕ ಸಂಪರ್ಕಧಿಕಾರಿ ಎಸ್.ಎನ್.ಆಚಾರ್ಯ ತಿಳಿಸಿದ್ದಾರೆ.
ಜೂನ್ 7ರಂದು ಪಾಕ್ ಪಡೆಯು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ನಡೆಸಿದ್ದ ಭಾರಿ ಪ್ರಮಾಣದ ದಾಳಿಯಲ್ಲಿ ಭಾರತದ ಸೇನೆ ಅಧಿಕಾರಿಯೊಬ್ಬರು ಮೃತಪಟ್ಟಿದ್ದರು. ಇದಕ್ಕೂ ಮುನ್ನ ಮೇ 24ರಂದು ಬ್ರಿಗೇಡಿಯರ್ ಸೇರಿದಂತೆ ಇಬ್ಬರು ಯೋಧರು ಪಾಕ್ ಸೈನಿಕರ ಗುಂಡಿನ ದಾಳಿಗೆ ಬಲಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.