ADVERTISEMENT

ಕದನ ವಿರಾಮದ ಪ್ರಶ್ನೆಯೇ ಇಲ್ಲ.

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 19:30 IST
Last Updated 11 ಫೆಬ್ರುವರಿ 2011, 19:30 IST
ಕದನ ವಿರಾಮದ ಪ್ರಶ್ನೆಯೇ ಇಲ್ಲ.
ಕದನ ವಿರಾಮದ ಪ್ರಶ್ನೆಯೇ ಇಲ್ಲ.   

‘ನವದೆಹಲಿ: ‘ದೇವೇಗೌಡರು ಮತ್ತು ಅವರ ಕುಟುಂಬದ ವಿರುದ್ಧ ಯುದ್ಧ ಸಾರಿಯಾಗಿದೆ. ಕದನ ವಿರಾಮ ಘೋಷಣೆ ಮಾಡುವ ಮಾತೇ ಇಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ಘೋಷಿಸಿದರು.ಭೂ ಹಗರಣ ಸೇರಿದಂತೆ ದೇವೇಗೌಡರ ಕುಟುಂಬ ಬೇಕಾದಷ್ಟು ಅಕ್ರಮಗಳಲ್ಲಿ ಭಾಗಿಯಾಗಿದೆ. ಎಲ್ಲವನ್ನು ಬಯಲಿಗೆ ಎಳೆಯಲಾಗುತ್ತಿದೆ. ಜನರಿಗೆ ಸಂಬಂಧಿಸಿದ ವಿಷಯಗಳಲ್ಲಿ ರಾಜಿ ಮಾತೇ ಇಲ್ಲ ಎಂದು ಗುಡುಗಿದರು.

ಮಾಜಿ ಪ್ರಧಾನಿ ಕುಟುಂಬ ಕೆರೆಗಳನ್ನೇ ನುಂಗಿದೆ. ಗೋಮಾಳಗಳನ್ನೇ ಕಬಳಿಸಿದೆ. ದಲಿತರ ಭೂಮಿ ಕಸಿದುಕೊಂಡು ಬೀದಿಪಾಲು ಮಾಡಿದೆ. ಈ ಕುಟುಂಬ ಮಾಡಿರುವ ಅಕ್ರಮಗಳನ್ನು ಪಟ್ಟಿ ಮಾಡಿ ಈ ತಿಂಗಳ 20ರೊಳಗೆ ‘ಚಾರ್ಜ್‌ಷೀಟ್’ ಬಿಡುಗಡೆ ಮಾಡಲಾಗುತ್ತಿದೆ.ಅಲ್ಲದೆ, 21ರಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲೂ ಗೌಡರು ಹಾಗೂ ಅವರ ಮಕ್ಕಳ ಅಕ್ರಮಗಳನ್ನು ಪ್ರಸ್ತಾಪಿಸಲು ಬಿಜೆಪಿ ಸಂಸದರಿಗೆ ಹೇಳಲಾಗಿದೆ. ಎಲ್ಲ ವಿವರಗಳನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ಮೊದಲು ಜೆಡಿಎಸ್ ವರಿಷ್ಠರ ವಿರುದ್ಧ ಯುದ್ಧ. ಅನಂತರ ಕಾಂಗ್ರೆಸ್ ಸರದಿ. ರಾಜ್ಯಪಾಲರ ವಿರುದ್ಧದ ಕದನ ಮುಗಿದ ಅಧ್ಯಾಯ. ಅವರನ್ನು ವಾಪಸ್ ಕರೆಸಿಕೊಳ್ಳಬೇಕೆಂಬ ಬೇಡಿಕೆ ಈಗ ಇತಿಹಾಸ ಎಂದು ಮುಖ್ಯಮಂತ್ರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಬಿಜೆಪಿ ಸಂಸದೀಯ ಪಕ್ಷದ ಅಧ್ಯಕ್ಷ ಎಲ್.ಕೆ.ಅಡ್ವಾಣಿ ಮತ್ತು ಅರುಣ್ ಜೇಟ್ಲಿ ಅವರನ್ನು ಕಂಡು  ಮಾತನಾಡಿದೆ. ಸರ್ಕಾರದ ಕಾರ್ಯವೈಖರಿ, ವರ್ಚಸ್ಸು ಹೆಚ್ಚಿಸಲು ಕೈಗೊಂಡ ಕ್ರಮಗಳನ್ನು ಕುರಿತು ವಿವರಿಸಲಾಗಿದೆ. ಅವರಿಗೆ ರಾಜ್ಯದ ಆಡಳಿತ ಸಮಾಧಾನ ತಂದಿದೆ.ರಾಜಶೇಖರ ಮೂರ್ತಿ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ನಡೆಯಲಿರುವ ಚುನಾವಣೆ ಕುರಿತಂತೆ ವರಿಷ್ಠರ ಜತೆ ಸಮಾಲೋಚನೆ ನಡೆದಿದೆ. ನಾಲ್ಕೈದು ದಿನಗಳಲ್ಲಿ ಅಭ್ಯರ್ಥಿ ಹೆಸರು ಅಂತಿಮ ಆಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.