ಪುಣೆ: ಕನ್ನಡ ಮತ್ತು ಮರಾಠಿಯ ಅನುಬಂಧ ಪ್ರಾಚೀನ ಕಾಲದಿಂದ ನಡೆದು ಬಂದಿದೆ. ಈ ಅನ್ಯೋನ್ಯ ಅನುಬಂಧವನ್ನು ಬೆಳೆಸಲು ಪುಣೆಯ ಮರಾಠಿ- ಕನ್ನಡ ಸ್ನೇಹ ವರ್ಧನ ಕೇಂದ್ರ ನಡೆಸುತ್ತಿರುವ ಪ್ರಯತ್ನ ಅನುಕರಣೀಯ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ ಹೇಳಿದರು.
ಇಲ್ಲಿನ ಮರಾಠಿ- ಕನ್ನಡ ಸ್ನೇಹ ವರ್ಧನ ಕೇಂದ್ರ ಕನ್ನಡೇತರರಿಗಾಗಿ ಕಳೆದ ಎರಡು ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಕನ್ನಡ ಕಲಿಕಾ ವರ್ಗ ಮತ್ತು ಪ್ರಗತ ಕನ್ನಡ ಕಲಿಕಾ ವರ್ಗಗಳ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಅವರು ಭಾಗವಹಿಸಿದ್ದರು.
ಮಹಾರಾಷ್ಟ್ರ ರಾಜ್ಯವು ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಅಂಬೇಡ್ಕರ್ ಅವರಂತಹ ಸಮಾಜ ಸುಧಾರಕರ ನೆಲೆ. ಕನ್ನಡದ ದಲಿತ ಸಾಹಿತ್ಯ ಮರಾಠಿ ದಲಿತ ಸಾಹಿತ್ಯದಿಂದಲೇ ಪ್ರೇರಣೆ ಪಡೆದಿದ್ದು, ಸಮಗ್ರ ಭಾರತದಲ್ಲಿ ಕ್ರಾಂತಿಯ ಬೀಜವನ್ನು ಬಿತ್ತಿದ ಶ್ರೇಯಸ್ಸು ಮಹಾರಾಷ್ಟ್ರಕ್ಕೆ ಸೇರಿದೆ.
ಇಂತಹ ಸುಧಾರಕರ ಬೀಡಿನಲ್ಲಿ ಕನ್ನಡ ಭಾಷೆಯನ್ನು ಕಲಿಯುವುದರ ಜತೆಗೆ ಮರಾಠಿ ಭಾಷೆಯನ್ನು ಬೆಳೆಸಬೇಕು ಎಂದು ಮಾರ್ಮಿಕವಾಗಿ ನುಡಿದರು. ಕೇಂದ್ರದ ಗೌರವ ಕಾರ್ಯದರ್ಶಿ ಕೃ.ಶಿ.ಹೆಗಡೆ ಆರಂಭದಲ್ಲಿ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.