ADVERTISEMENT

ಕಪ್ಪುಹಣದ ಶ್ವೇತಪತ್ರ: ಲೋಕಪಾಲ, ಲೋಕಾಯುಕ್ತ ರಚನೆಗೆ ಒತ್ತು

​ಪ್ರಜಾವಾಣಿ ವಾರ್ತೆ
Published 21 ಮೇ 2012, 9:20 IST
Last Updated 21 ಮೇ 2012, 9:20 IST
ಕಪ್ಪುಹಣದ ಶ್ವೇತಪತ್ರ: ಲೋಕಪಾಲ, ಲೋಕಾಯುಕ್ತ ರಚನೆಗೆ ಒತ್ತು
ಕಪ್ಪುಹಣದ ಶ್ವೇತಪತ್ರ: ಲೋಕಪಾಲ, ಲೋಕಾಯುಕ್ತ ರಚನೆಗೆ ಒತ್ತು   

ನವದೆಹಲಿ (ಪಿಟಿಐ): ಸಂಸತ್ತಿನಲ್ಲಿ ಸೋಮವಾರ ಮಂಡನೆಯಾದ ದೀರ್ಘಕಾಲದಿಂದ ನಿರೀಕ್ಷಿಸಲಾಗಿದ್ದ ಕಪ್ಪು ಹಣ ಕುರಿತ ಶ್ವೇತಪತ್ರವು ಯಾರ ಹೆಸರನ್ನೂ ಪ್ರಕಟಿಸಿಲ್ಲವಾದರೂ ಕಪ್ಪು ಹಣದ ಹಾವಳಿ ನಿಯಂತ್ರಿಸಲು ಲೋಕಪಾಲ ಮತ್ತು ಲೋಕಾಯುಕ್ತ ರಚನೆಯ ಅಗತ್ಯವನ್ನು ಪ್ರಬಲವಾಗಿ ಪ್ರತಿಪಾದಿಸಿದೆ.

ಲೋಕಸಭೆಯಲ್ಲಿ ಶ್ವೇತಪತ್ರವನ್ನು ಮಂಡಿಸಿದ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ದೇಶದ ಒಳಗೆ ಹಾಗೂ ಹೊರಗೆ ಇರುವ ಕಪ್ಪುಹಣ ಕುರಿತ ಸರ್ಕಾರದ ಅಂದಾಜನ್ನು ನೀಡಲಿಲ್ಲ. ಆದರೆ ವಿವಿಧ ಸಂಸ್ಥೆಗಳು ಈ ನಿಟ್ಟಿನಲ್ಲಿ ಮಾಡಿದ ಅಂದಾಜುಗಳನ್ನು ಉಲ್ಲೇಖಿಸಿದ್ದಾರೆ.

ಏನಿದ್ದರೂ 97 ಪುಟಗಳ ಈ ದಾಖಲೆಯು ಆರ್ಥಿಕ ಅಪರಾಧಗಳ ಜೊತೆ ವ್ಯವಹರಿಸಲು ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಕ್ಷಿಪ್ರ ವಿಚಾರಣಾ ನ್ಯಾಯಾಲಯಗಳನ್ನು ಸ್ಥಾಪಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿದೆ.

~ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್~ಗಳ ಬಳಕೆಯಿಂದ ಲೆಕ್ಕಾಚಾರಗಳು ಲಭ್ಯವಾಗುವುದರಿಂದ ಇವುಗಳ ಬಳಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ ತೆರಿಗೆ ವಿನಾಯ್ತಿ ಲಾಭಗಳನ್ನು ನೀಡಬೇಕು ಎಂಬ ಸಲಹೆಯನ್ನು ಶ್ವೇತಪತ್ರ ನೀಡಿದೆ.

ಕಪ್ಪು ಹಣದ ಜೊತೆ ವ್ಯವಹರಿಸುವ ಸಲುವಾಗಿ ಯಾವುದೇ ತೆರಿಗೆ ವಿನಾಯ್ತಿ ಯೋಜನೆ ಸಾಧ್ಯತೆಗೆ ಸಂಬಂಧಿಸಿದಂತೆ, ವಿಶೇವಾಗಿ ಚಿನ್ನ ಠೇವಣಿ ಯೋಜನೆಗೆ ಸಂಬಂಧಿಸಿದಂತೆ ಪ್ರಸ್ತಾಪಿಸಿದ ಶ್ವೇತಪತ್ರ ಇತರ ನೀತಿಗಳ ಗುರಿಗಳ ಬೆಳಕಿನಲ್ಲಿ ಇದನ್ನು ಪರಿಶೀಲಿಸಬೇಕು ಎಂದು ಸಲಹೆ ಮಾಡಿದೆ.

ಕಪ್ಪುಹಣಕ್ಕೆ ಸಂಬಂಧಿಸಿದಂತೆ ಸರ್ಕಾರ ಏನೂ ಮಾಡುತ್ತಿಲ್ಲ ಎಂಬ ಭಾವನೆಯನ್ನು ನಿವಾರಿಸಬೇಕು ಎಂದು ಕೋರಿರುವ ಶ್ವೇತಪತ್ರವು, ಸಾರ್ವಜನಿಕ ಜೀವನದಲ್ಲಿನ ಭ್ರಷ್ಟಾಚಾರದ ವಿಷಯದೊಂದಿಗೆ ವ್ಯವಹರಿಸಲು ಕೈಗೊಳ್ಳಬಹುದಾದ ನೀತಿ ಸಾಧ್ಯತೆಗಳು ಹಾಗೂ ಕಾರ್ಯತಂತ್ರಗಳ ಬಗೆಗೂ ಚರ್ಚಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.