ಡೆಹ್ರಾಡೂನ್ (ಪಿಟಿಐ): ಇಲ್ಲಿನ ಹಿಮಾಲಯನ್ ಆಸ್ಪತ್ರೆಯಿಂದ ಮಂಗಳವಾರ ಹಿಂತಿರುಗಿದ ಬಾಬಾ ರಾಮ್ದೇವ್ ಕಪ್ಪುಹಣದ ವಿರುದ್ಧ ತಾವು ನಡೆಸುತ್ತಿರುವ ನಿರಶನವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
`ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಯಾವುದೇ ಪಾಪ ಮಾಡಿಲ್ಲ. ಕೊನೆಯ ಉಸಿರು ಇರುವವರೆಗೂ ಜನರ ಬೆಂಬಲದಿಂದ ಸತ್ಯಾಗ್ರಹ ಮುಂದುವರಿಸುತ್ತೇನೆ~ ಎಂದರು.
`ವಿದೇಶಗಳಲ್ಲಿ ಭಾರತೀಯರು ಇರಿಸಿರುವ ಸುಮಾರು ನಾಲ್ಕು ಲಕ್ಷ ಕೋಟಿ ರೂಪಾಯಿಗಳಷ್ಟು ಕಪ್ಪುಹಣವನ್ನು ಸ್ವದೇಶಕ್ಕೆ ತರಬೇಕು ಎಂಬುದು ನಮ್ಮಒತ್ತಾಯ. ಸಂಸತ್ ಮತ್ತು ರಾಜ್ಯಗಳ ಶಾಸನಸಭೆಗಳಿಗೆ ಕಳಂಕ ರಹಿತರು ಆಯ್ಕೆ ಆಗಬೇಕು ಎಂಬುದು ಜನರ ಆಶಯ~ ಎಂದು ಸುದ್ದಿಗಾರರಿಗೆ ತಿಳಿಸಿದರು.
`ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿದ್ದ ಸತ್ಯಾಗ್ರಹದ ಮೇಲೆ ಕೇಂದ್ರ ಸರ್ಕಾರ ದಾಳಿ ನಡೆಸಿದ್ದು ಖಂಡನೀಯ~ ಎಂದರು.ಎರಡು- ಮೂರು ದಿನ ಯೋಗಾಭ್ಯಾಸದಲ್ಲಿ ತೊಡಗದೆ ವಿಶ್ರಾಂತಿ ಪಡೆಯುವಂತೆ ರಾಮ್ದೇವ್ ಅವರಿಗೆ ಹಿಮಾಲಯನ್ ಆಸ್ಪತ್ರೆಯ ವೈದ್ಯರು ಸಲಹೆ ನೀಡಿದ್ದಾರೆ.
ಒಂಬತ್ತು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ ರಾಮ್ದೇವ್, ಶ್ರೀರವಿಶಂಕರ್ ಗುರೂಜಿ ಮತ್ತಿತರ ಧಾರ್ಮಿಕ ಮುಂಖಡರ ಮನವೊಲಿಕೆಯಿಂದ ಭಾನುವಾರ ಉಪವಾಸ ನಿರಶನವನ್ನು ಕೈಬಿಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.