ADVERTISEMENT

ಕಪ್ಪು ಹಣ ತಡೆಗೆ ಐದಂಶದ ಸೂತ್ರ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST


ನವದೆಹಲಿ: ದೇಶದಾದ್ಯಂತ ಕೆಲವು ತಿಂಗಳಿಂದ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿರುವ ಕಪ್ಪು ಹಣ ಗಳಿಕೆ ಮತ್ತು ಪ್ರಸರಣದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಇದರ ತಡೆಗೆ ಐದು ಅಂಶಗಳ ಕಾರ್ಯಕ್ರಮ ಜಾರಿಗೆ ಕೊಡುವುದಾಗಿ ಘೋಷಿಸಿದ್ದಾರೆ.

ಕಪ್ಪು ಹಣ ಗಳಿಕೆ- ಪ್ರಸರಣ ಆತಂಕಕಾರಿ ಸಂಗತಿ. ಇದರ ತಡೆಗೆ ಐದು ಅಂಶಗಳ ತಂತ್ರಗಳನ್ನು ರೂಪಿಸುವ ಮೂಲಕ ಈ ನಿಟ್ಟಿನಲ್ಲಿ ನಡೆದಿರುವ ಜಾಗತಿಕ ಹೋರಾಟ ಬೆಂಬಲಿಸಲಾಗುವುದು ಎಂದು ಪ್ರಣವ್ ಮುಖರ್ಜಿ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದರು.

ಮಾದಕವಸ್ತು ಕಳ್ಳಸಾಗಣೆ ಕಪ್ಪು ಹಣ ಗಳಿಕೆಗೆ ಮಹತ್ವದ ಕಾಣಿಕೆ ನೀಡುತ್ತಿದ್ದು, ಇದರ ತಡೆಗೆ ಸಮಗ್ರ ನೀತಿ ಸದ್ಯದಲ್ಲೇ ರೂಪಿಸಲಾಗುವುದು.
ಸರ್ಕಾರ ಪ್ರಸಕ್ತ ವರ್ಷ 11’ತೆರಿಗೆ ಮಾಹಿತಿ ವಿನಿಮಯ ಒಪ್ಪಂದ’, 13ಹೊಸ ‘ದುಪ್ಪಟ್ಟು ತೆರಿಗೆ ತಡೆ ಒಪ್ಪಂದ’ ಮತ್ತು ಈಗಾಗಲೇ ಮಾಡಿಕೊಂಡ 10 ದುಪ್ಪಟ್ಟು ತೆರಿಗೆ ತಡೆ ಒಪ್ಪಂದ ಪರಾಮರ್ಶೆ ನಡೆಸುವ ಕುರಿತು ಚರ್ಚಿಸಿದೆ. ದೇಶದ ಒಳಗೆ ಮತ್ತು ಹೊರಗಿರುವ ಲೆಕ್ಕ ಕೊಡದ ಹಣದ ಬಗ್ಗೆ ಪರಿಶೀಲನೆ ನಡೆಸಲಿದೆ. ಈ ಸಂಬಂಧ 2009ರಲ್ಲಿ ಜಾರಿಗೆ ತಂದಿರುವ ಕಾನೂನಿಗೆ ಸೂಕ್ತ ತಿದ್ದುಪಡಿ ತರುವ ಅಗತ್ಯವಿದೆ ಎಂದರು.

ಈ ಕಾನೂನಿನಡಿ 2005-08ರ ನಡುವೆ ಕೇವಲ 50 ಪ್ರಕರಣ ನೋಂದಣಿ ಮಾಡಲಾಗಿತ್ತು. ಈ ವರ್ಷದ ಜನವರಿಗೆ ಇದು 1200ಕ್ಕೆ ಏರಿದೆ. ಈ ಉದ್ದೇಶಕ್ಕಾಗಿ ಜಾರಿ ನಿರ್ದೇಶನಾಲಯವನ್ನು ಮತ್ತಷ್ಟು ಶಕ್ತಿಯುತಗೊಳಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.