ರಾಯಗಡ/ಮುಂಬೈ: ಭಾರತೀಯ ಕರಾವಳಿ ಕಾವಲು ಪಡೆಗೆ ಸೇರಿದ ಚೇತಕ್ ಹೆಲಿಕಾಪ್ಟರ್ ಶನಿವಾರ ನಂದಗಾವ್ ಬೀಚ್ ಬಳಿ ಏಕಾಏಕಿ ಇಳಿದಿದ್ದರಿಂದ ಅಪಘಾತಕ್ಕೆ ಈಡಾಗಿದೆ.
ಅಪಘಾತಕ್ಕೀಡಾದ ಸಿಜಿ–803 ಹೆಲಿಕಾಪ್ಟರ್ನಲ್ಲಿ ಡೆಪ್ಯುಟಿ ಕಮಾಂಡೆಂಟ್ ಬಲ್ವಿಂದರ್ ಸಿಂಗ್, ಸಹಾಯಕ ಕಮಾಂಡೆಂಟ್ ಪೆನ್ನಿ ಚೌಧರಿ, ಪೈಲಟ್ಗಳಾದ ಸಂದೀಪ್ ಮತ್ತು ಬಲ್ಜೀತ್ ಇದ್ದರು.
‘ಅಪಘಾತವಾದ ಕೂಡಲೇ ನೌಕಾಪಡೆಯ ಮೂರು ಹೆಲಿಕಾಪ್ಟರ್ಗಳು ಮತ್ತು ವಾಯು ಪಡೆಯ ಎಂಐ 17 ಹೆಲಿಕಾಪ್ಟರ್ ಬಳಸಿ ಕಾರ್ಯಾಚರಣೆ ನಡೆಸುವ ರಕ್ಷಿಸಲಾಗಿದೆ. ಪೆನ್ನಿ ಚೌಧರಿ ಅವರು ಗಾಯಗೊಂಡಿದ್ದು ಅವರನ್ನು ಮುಂಬೈನ ನೌಕಾಪಡೆಯ ‘ಅಶ್ವಿನಿ’ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ನೌಕಾ ಪಡೆಯ ವಕ್ತಾರರು ತಿಳಿಸಿದ್ದಾರೆ.
‘ದೈನಂದಿನ ಗಸ್ತು ಕಾರ್ಯದಲ್ಲಿ ತೊಡಗಿದ್ದ ಹೆಲಿಕಾಪ್ಟರ್, ಟೇಕ್ ಆಫ್ ಆದ 25 ನಿಮಿಷದ ನಂತರ ತಾಂತ್ರಿಕ ತೊಂದರೆ ಕಾಣಿಸಿಕೊಂಡಿರುವುದು ಈ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ’ ಎಂದು ತಿಳಿಸಿದ್ದಾರೆ.
‘ಬಲ್ವಿಂದರ್ ಸಿಂಗ್ ತಮ್ಮ ಕೌಶಲ ಬಳಸಿ ಹೆಲಿಕಾಪ್ಟರ್ಗೆ ಹೆಚ್ಚು ಹಾನಿ ಆಗುವುದನ್ನು ತಪ್ಪಿಸಿದ್ದಲ್ಲದೆ, ಜನನಿಬಿಡ ಪ್ರದೇಶ ಮತ್ತು ಸಮುದ್ರ ಪ್ರದೇಶದಲ್ಲಿ ಲ್ಯಾಂಡ್ ಆಗುವುದನ್ನು ತಡೆದಿದ್ದಾರೆ. ಎಲ್ಲರೂ ಅವರ ಕೌಶಲದಿಂದಾಗಿ ಬದುಕುಳಿದಿದ್ದಾರೆ’ ಎಂದು ಕರಾವಳಿ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.