ನವದೆಹಲಿ (ಪಿಟಿಐ): ರಾಜ್ಯದ ಬಿಜೆಪಿ ಸರ್ಕಾರವು ಕೋಮಾ ಸ್ಥಿತಿಯಲ್ಲಿದೆ ಎಂದು ಖಾರವಾಗಿ ನುಡಿದಿರುವ ಸುಪ್ರೀಂಕೋರ್ಟ್ ರಾಜ್ಯದಲ್ಲಿ ಸರ್ಕಾರ ಇದೆಯೇ ಎಂದು ಪ್ರಶ್ನಿಸಿದೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಹುದೆಂದು ಬೆಂಗಳೂರು-ಮೈಸೂರು ಹೆದ್ದಾರಿ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಭೂ ಸ್ವಾಧೀನಪಡಿಸಿಕೊಳ್ಳಲು ಮಂದಗತಿ ದೋರಣೆ ತಳೆದಿರುವುದಾಗಿ ರಾಜ್ಯ ಸುಪ್ರೀಕೋರ್ಟ್ ನಲ್ಲಿ ವಾದ ಮಂಡಿಸುತ್ತಿದ್ದಂತೆ ಕೆಂಡಾಮಂಡಲವಾದ ನ್ಯಾಯಮೂರ್ತಿ ಸಿರ್ಪುರಕರ್, ಆರ್.ಎಂ.ಲೋಧಾ ಹಾಗೂ ಟಿ.ಎಸ್. ಥಾಕೂರ್ ಅವರಿದ್ದ ತ್ರಿಸದಸ್ಯ ಪೀಠ ಕರ್ನಾಟಕದಲ್ಲಿ ಸರ್ಕಾರ ಕೋಮಾ ಸ್ಥಿತಿಯಲ್ಲಿದೆ ಎಂದು ಅನ್ನಿಸುತ್ತಿದೆ ಎಂದು ಹೇಳಿತು.
2,500 ಕೋಟಿ ರೂ ವೆಚ್ಚದಲ್ಲಿ 5 ಸೆಟಲೈಟ್ ನಗರಗಳನ್ನು ಬೆಂಗಳೂರು - ಮೈಸೂರು ಹೆದ್ದಾರಿ ಕಾರಿಡಾರ್ ರಸ್ತೆಗೆ ಹೊಂದಿಕೊಂಡಂತೆ ನಿರ್ಮಿಸಲು ಭೂ ಸ್ವಾಧೀನಪಡಿಸಿಕೊಳ್ಳಲು ಇರುವ ಅಡೆತಡೆಗಳಾದರೂ ಏನು? ಇಲ್ಲಿ ಕಾನೂನು ಸುವ್ಯವಸ್ಥೆಯ ಪ್ರಶ್ನೆ ಏಳುವುದಾದರೂ ಎಂತು? ಒಂದು ವೇಳೆ ಕಾನೂನು ಸುವ್ಯವಸ್ಥೆಯ ಭಯ ಇರುವುದಾದರೆ ರಾಜ್ಯದಲ್ಲಿ ಆಡಳಿತ ನಡೆಸಬೇಡಿ ಎಂದು ನ್ಯಾಯಪೀಠ ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.