ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಸ್ವಚ್ಛ ಭಾರತ ಅಭಿಯಾನ’ವನ್ನು ಉನ್ನತ ಶಿಕ್ಷಣದಲ್ಲಿ ಐಚ್ಛಿಕ ವಿಷಯವನ್ನಾಗಿ (ಎಲೆಕ್ಟಿವ್ ಕೋರ್ಸ್) ಪರಿಗಣಿಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಎಲ್ಲ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಿಗೆ ಸೂಚಿಸಿದೆ.
ಸರ್ಕಾರದ ಈ ಆಂದೋಲನದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮತ್ತು ಶುಚಿತ್ವವನ್ನು ಅವರು ಗಂಭೀರವಾಗಿ ಪರಿಗಣಿಸಲು ಈ ವಿಷಯಕ್ಕೆ ನಿರ್ದಿಷ್ಟ ಬೋಧನಾ ಅವಧಿ ಮತ್ತು ಅಂಕಗಳನ್ನು ನಿಗದಿಪಡಿಸುವಂತೆ ಸೂಚಿಸಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ‘ಆಯ್ಕೆ ಆಧರಿತ ಕ್ರೆಡಿಟ್ ವ್ಯವಸ್ಥೆ’ (ಸಿಬಿಸಿಎಸ್) ಅಡಿ ಐಚ್ಛಿಕ ವಿಷಯಗಳ ವಿದ್ಯಾರ್ಥಿಗಳಿಗೆ ನೀಡುವಂತೆಯೇ ಬೇಸಿಗೆಯಲ್ಲಿ 15 ದಿನ ಅಥವಾ 100 ಗಂಟೆಗಳ ಸ್ವಚ್ಛತೆ ತರಬೇತಿ ನೀಡಬೇಕು. ಇದನ್ನು ಪೂರ್ಣಗೊಳಿಸುವ ವಿದ್ಯಾರ್ಥಿಗಳಿಗೆ ‘ಎರಡು ಕ್ರೆಡಿಟ್’ ನೀಡಲು ಯುಜಿಸಿ ಇತ್ತೀಚೆಗೆ ನಡೆದ ಸಭೆಯಲ್ಲಿ ಒಪ್ಪಿಗೆ ನೀಡಿದೆ.
ವಿದ್ಯಾರ್ಥಿಗಳು ಬೇಸಿಗೆಯಲ್ಲಿ 15 ದಿನ ಗ್ರಾಮ ಅಥವಾ ಕೊಳಗೇರಿಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಅಂತಹ ವಿದ್ಯಾರ್ಥಿಗಳು ಎರಡು ಕ್ರೆಡಿಟ್ ಪಡೆಯಲು ಅರ್ಹರಾಗುತ್ತಾರೆ.
ಇದೇ ಬೇಸಿಗೆಯಿಂದಲೇ ಇದನ್ನು ಅನುಷ್ಠಾನಗೊಳಿಸುವಂತೆ ಆಯೋಗವು ಎಲ್ಲ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಿಗೆ ಸೂಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.