ADVERTISEMENT

ಕಾಂಗ್ರೆಸ್ ಅಧ್ಯಕ್ಷತೆ: ಸೋನಿಯಾ ವಿರೋಧಿಸಿದ್ದ ನರಸಿಂಹರಾವ್

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 19:30 IST
Last Updated 3 ಜುಲೈ 2012, 19:30 IST

ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ನಂತರ ಅವರ ಪತ್ನಿ ಸೋನಿಯಾ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ  ನೇಮಿಸುವ ಪ್ರಸ್ತಾಪಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಪಿ.ವಿ. ನರಸಿಂಹರಾವ್ ಅವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ರೈಲು ಬೋಗಿಗಳಂತೆ ನೆಹರೂ, ಗಾಂಧಿ ಪರಿವಾರದವರನ್ನು ಪಕ್ಷಕ್ಕೆ ಜೋಡಿಸಬೇಕೇ ಎಂದು ರಾವ್ ಕಿಡಿಕಾರಿದ್ದರು. 

ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ಅರ್ಜುನ್ ಸಿಂಗ್ ಅವರ ಆತ್ಮಚರಿತ್ರೆ `ಎ ಗ್ರೇನ್ ಆಫ್ ಸೌಂಡ್ ಇನ್ ದಿ ಅವರ್‌ಗ್ಲಾಸ್ ಆಫ್ ಟೈಮ್~ನಲ್ಲಿ ಈ ವಿಷಯ ಬಹಿರಂಗವಾಗಿದೆ. ರಾವ್ ಅವರ ಈ ನಿಲುವಿನಿಂದಾಗಿ `ರಾಜಕೀಯದ ಬಗ್ಗೆಯೇ ಹೇಸಿಗೆ ಮೂಡುವಂತಾಯಿತು~ ಎಂದು ಸಿಂಗ್ ಕೃತಿಯಲ್ಲಿ ಹೇಳಲಾಗಿದೆ.

383 ಪುಟಗಳ ಈ ಪುಸ್ತಕವನ್ನು ಹೇ ಹೌಸ್ ಇಂಡಿಯಾ ಹೊರತರುತ್ತಿದ್ದು ಅಶೋಕ ಚೋಪ್ರಾ ಸಹ ಲೇಖಕರಾಗಿದ್ದಾರೆ. ಚೋಪ್ರಾ ಹೇಳುವಂತೆ, ಅರ್ಜುನ್ ಸಿಂಗ್ ಕಳೆದ ವರ್ಷದ ಮಾರ್ಚ್ 4 ರಂದು ನಿಧನರಾಗಿದ್ದರಿಂದ ಈ ಕೃತಿಯನ್ನು ಪೂರ್ಣಗೊಳಿಸಲಾಗಲಿಲ್ಲ.

ಸಿಂಗ್ ಅವರ ಕುಟುಂಬ ಸದಸ್ಯರನ್ನು ಹಾಗೂ ಅವರ ಒಡನಾಡಿಗಳನ್ನು ಸಂಪರ್ಕಿಸಿ ಕೃತಿಯನ್ನು ಪೂರ್ಣಗೊಳಿಸುವ ಯತ್ನ ಮಾಡುತ್ತಿರುವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.