ADVERTISEMENT

ಕಾಂಗ್ರೆಸ್ ಜತೆ ಸೇರಲು ಪ್ರಜಾರಾಜ್ಯಂ ಸಿದ್ಧ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 16:30 IST
Last Updated 3 ಫೆಬ್ರುವರಿ 2011, 16:30 IST

ಹೈದರಾಬಾದ್ (ಪಿಟಿಐ):  ಸಾಮಾಜಿಕ ನ್ಯಾಯದ ಉದ್ದೇಶ ಈಡೇರಿಕೆಗೆ ಕಾಂಗ್ರೆಸ್ ಜೊತೆಗೂಡಿ ಕಾರ್ಯನಿರ್ವಹಿಸಲು ಸಿದ್ಧ ಎಂದು ಪ್ರಜಾರಾಜ್ಯಂ ಪಕ್ಷದ ರಾಜಕೀಯ ವ್ಯವಹಾರ ಸಮಿತಿ ಸದಸ್ಯ ಸಿ.ರಾಮಚಂದ್ರಯ್ಯ ತಿಳಿಸಿದರು.

ಆದರೆ, ಇದಕ್ಕಾಗಿ ಆ ಪಕ್ಷದೊಂದಿಗೆ ವಿಲೀನವಾಗಬೇಕೇ ಅಥವಾ ಬೇಡವೇ ಎಂಬುದನ್ನು ಪಕ್ಷದ ಅಧ್ಯಕ್ಷ ಕೆ.ಚಿರಂಜೀವಿ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಬಳಿಕ ಸೂಕ್ತ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಗುರುವಾರ ನಡೆದ ಪಕ್ಷದ ಶಾಸಕರು ಮತ್ತು ಹಿರಿಯ ಮುಖಂಡರ ಸಭೆಯ ಬಳಿಕ ಮಾಧ್ಯಮದವರಿಗೆ ಹೇಳಿದರು.

‘ಕೇವಲ ಪ್ರಜಾರಾಜ್ಯಂ ಪಕ್ಷವೊಂದರಿಂದಲೇ ಹಿಂದುಳಿದವರ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಒದಗಿಸಿಕೊಡಲು ಸಾಧ್ಯವಿಲ್ಲ ಎಂಬುದನ್ನು ಮನಗಂಡಿದ್ದೇವೆ. ಆದ್ದರಿಂದ ಕಾಂಗ್ರೆಸ್ ಜೊತೆ ಕೈಜೋಡಿಸಲು ನಿರ್ಧರಿಸಲಾಯಿತು’ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಜೊತೆ ಸೇರಿ ಕಾರ್ಯ ನಿರ್ವಹಿಸಲಾಗುವುದು ಎಂದರೆ ಆ ಪಕ್ಷದೊಂದಿಗೆ ವಿಲೀನ ಎಂದರ್ಥವೇ ಎಂಬುದನ್ನು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.