ADVERTISEMENT

ಕಾಶಿ ವಿಶ್ವನಾಥ ದೇವಸ್ಥಾನ ಸ್ಫೋಟ: ಎಲ್‌ಇಟಿ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 19:30 IST
Last Updated 6 ಜೂನ್ 2018, 19:30 IST

ಲಖನೌ: ಉತ್ತರ ಪ್ರದೇಶದಲ್ಲಿರುವ ಕೆಲವು ರೈಲು ನಿಲ್ದಾಣ, ಕೃಷ್ಣ ಜನ್ಮಭೂಮಿ ಹಾಗೂ ಕಾಶಿ ವಿಶ್ವನಾಥ ದೇವಾಲಯಗಳನ್ನು ಸ್ಫೋಟಿಸುವುದಾಗಿ ಲಷ್ಕರ್‌–ಎ–ತಯ್ಯಬಾ (ಎಲ್‌ಇಟಿ) ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರು ‘ಹೈ ಅಲರ್ಟ್‌’ ಘೋಷಿಸಿದ್ದಾರೆ.

ಉಗ್ರ ಸಂಘಟನೆಯ ಕಮಾಂಡರ್‌ ಮೌಲಾನಾ ಅಂಬು ಶೇಖ್‌ ಉತ್ತರ ರೈಲ್ವೆಗೆ ಮೇ 29ರಂದು ಕಳುಹಿಸಿದ್ದು ಎನ್ನಲಾದ ಪತ್ರದಲ್ಲಿ ಈ ಬೆದರಿಕೆ ಸಂದೇಶ ಇದ್ದು, ಸಹರನ್‌ಪುರ ಮತ್ತು ಹಾಪುರ ರೈಲು ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.

‘ಉತ್ತರ ಪ್ರದೇಶವಷ್ಟೇ ಅಲ್ಲದೇ, ಹರಿಯಾಣ, ಪಂಜಾಬ್‌ ಮತ್ತು ರಾಜಸ್ಥಾನಗಳಲ್ಲಿ ಸಹ ವಿಧ್ವಂಸಕ ಕೃತ್ಯ ಎಸಗುವುದಾಗಿ ಸಂಘಟನೆಯು ಫಿರೋಜ್‌ಪುರ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಬರೆದಿರುವ ಪತ್ರದಲ್ಲಿ ಬೆದರಿಕೆ ಹಾಕಿದೆ’ ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆನಂದಕುಮಾರ್ ತಿಳಿಸಿದ್ದಾರೆ.

ADVERTISEMENT

‘ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜನರು ಭೀತಿಗೊಳಗಾಗುವ ಅಗತ್ಯ ಇಲ್ಲ. ಅಂಬು ಶೇಖ್‌ ಎಂಬ ಹೆಸರಿನ ವ್ಯಕ್ತಿ ಬಗ್ಗೆ ಗುಪ್ತಚರ ವಿಭಾಗದ ಸಿಬ್ಬಂದಿಗೆ ಮಾಹಿತಿ ಇಲ್ಲ. ಈ ರೀತಿ ಪತ್ರ ಬರೆದಿರುವುದು ಯಾರದೋ ಕುಚೇಷ್ಟೆಯಾಗಿರಬಹುದು’ ಎಂದೂ ಕುಮಾರ್‌ ಹೇಳಿದ್ದಾರೆ.

‘ಜೂನ್‌ 8ರಿಂದ 10ರ ಅವಧಿಯಲ್ಲಿ ಮಥುರಾದಲ್ಲಿನ ಕೃಷ್ಣ ಜನ್ಮಭೂಮಿ, ವಾರಾಣಸಿಯಲ್ಲಿರುವ ವಿಶ್ವನಾಥ ದೇವಸ್ಥಾನ  ಸ್ಫೋಟಿಸುವುದಾಗಿ ಬೆದರಿಕೆ ಪತ್ರ ಬಂದಿರುವ ಕಾರಣ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ’ ಎಂದು ಮತ್ತೊಬ್ಬ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.