ADVERTISEMENT

ಕುಟುಕು ಕಾರ್ಯಾಚರಣೆ ಹೆಚ್ಚಿನ ತನಿಖೆ: ಸಿಬಿಐಗೆ ಪತ್ರ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಗುಜರಾತ್‌ನಲ್ಲಿ ನಡೆದ ತುಳಸಿರಾಮ್ ಪ್ರಜಾಪತಿ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಕುಟುಕು ಕಾರ್ಯಾಚರಣೆ ಬೆಳಕಿಗೆ ಬಂದ ಬೆನ್ನಲ್ಲೇ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ, ಪ್ರಕರಣದ ತನಿಖೆ ಮತ್ತು ನ್ಯಾಯಾಲಯದಲ್ಲಿಯ ವಿಚಾರಣೆ ಯಾವ ದಿಕ್ಕಿನಲ್ಲಿ ಸಾಗಿದೆ ಎಂಬ ಕುರಿತು ಹೆಚ್ಚಿನ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದೆ.

ಕುಟುಕು ಕಾರ್ಯಾಚರಣೆ ಬೆಳಕು ಚೆಲ್ಲಿದ ವಿವರಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ನಿರ್ಧರಿಸಿರುವ ಆಯೋಗ ಈ ಕುರಿತು ಗುಜರಾತ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದೆ. ಪ್ರಕರಣಕ್ಕೆ ಸಂಬಂಧಿಸಿದ ಬೆಳವಣಿಗೆ ಮತ್ತು ತನಿಖೆಯಲ್ಲಾದ ಪ್ರಗತಿ ಕುರಿತು ವಿವರಣೆ ನೀಡುವಂತೆ ಸೂಚಿಸಿದೆ. ಒಂದು ವೇಳೆ ವರದಿ ನೀಡಲು ತಪ್ಪಿದಲ್ಲಿ ಸಮನ್ಸ್ ನೀಡುವುದಾಗಿಯೂ ಆಯೋಗ ಎಚ್ಚರಿಸಿದೆ.

ಸಿಬಿಐ ನಿರ್ದೇಶಕ ರಣಜಿತ್ ಸಿನ್ಹಾ ಅವರಿಗೆ ಬರೆಯಲಾದ ಪತ್ರದ ಜೊತೆ ಕುಟುಕು ಕಾರ್ಯಾಚರಣೆಯ ಸಿ.ಡಿಯನ್ನೂ ಲಗತ್ತಿಸಲಾಗಿದೆ. ಸಿ.ಡಿಯಲ್ಲಿರುವ ವಿಷಯಗಳ ಕುರಿತು ತಕ್ಷಣ ಸುಪ್ರೀಂಕೋರ್ಟ್‌ಗೆ ವಿವರಣೆ ನೀಡುವಂತೆಯೂ ಆಯೋಗ ತಿಳಿಸಿದೆ.

ಪ್ರಜಾಪತಿ ನಕಲಿ ಎನ್‌ಕೌಂಟರ್‌ನಲ್ಲಿ ಆರೋಪ ಎದುರಿಸುತ್ತಿರುವ ಮಾಜಿ ಗೃಹ ಸಚಿವ ಅಮಿತ್ ಷಾ ಅವರನ್ನು ಪಾರು ಮಾಡಲು ಬಿಜೆಪಿಯ ಮೂವರು ಸಂಸದರು ರೂಪಿಸಿದ್ದ ಸಂಚನ್ನು ಕುಟುಕು ಕಾರ್ಯಾಚರಣೆ ಬೆಳಕಿಗೆ ತಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.