ADVERTISEMENT

ಕೃಷ್ಣಮೃಗ ಬೇಟೆ ಪ್ರಕರಣ: ನಟ ಸಲ್ಮಾನ್ ನಿರಾಳ

​ಪ್ರಜಾವಾಣಿ ವಾರ್ತೆ
Published 24 ಜನವರಿ 2013, 12:34 IST
Last Updated 24 ಜನವರಿ 2013, 12:34 IST
ಕೃಷ್ಣಮೃಗ ಬೇಟೆ ಪ್ರಕರಣ: ನಟ ಸಲ್ಮಾನ್ ನಿರಾಳ
ಕೃಷ್ಣಮೃಗ ಬೇಟೆ ಪ್ರಕರಣ: ನಟ ಸಲ್ಮಾನ್ ನಿರಾಳ   

ನವದೆಹಲಿ (ಐಎಎನ್‌ಎಸ್): 1998ರಲ್ಲಿ ನಡೆದ ಕೃಷ್ಣಮೃಗ ಹತ್ಯೆ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ಸೇರಿದಂತೆ ಇತರ ನಾಲ್ವರ ವಿರುದ್ಧದ ರಾಜಸ್ಥಾನ ಸರ್ಕಾರ ಮಾಡಿದ ದೊಂಬಿ ಆರೋಪವನ್ನು ಗುರುವಾರ ತಳ್ಳಿಹಾಕಿದ ಸುಪ್ರೀಂ ಕೋರ್ಟ್ ಪ್ರಕರಣವನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ವಿಚಾರಣೆ ನಡೆಸುವಂತೆ ಹೇಳಿದೆ. ಇದರಿಂದಾಗಿ ಸಲ್ಮಾನ್ ಕೊಂಚ ನಿರಾಳರಾಗಿದ್ದಾರೆ.

ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಪಿ.ಸದಾಶಿವಂ ಅವರ ನೇತೃತ್ವದ ನ್ಯಾಯಪೀಠವು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳಡಿ ಸಲ್ಮಾನ್ ಖಾನ್ ಹಾಗೂ ಇತರ ನಾಲ್ವರ ವಿರುದ್ಧದ ರಾಜಸ್ಥಾನ ಸರ್ಕಾರದ ವಾದ ಸ್ವೀಕರಿಸಲು ನಿರಾಕರಿಸಿತು.

ಸಲ್ಮಾನ್ ಖಾನ್ ಹಾಗೂ ಇತರ ನಾಲ್ವರ ವಿರುದ್ಧದ ದೊಂಬಿ ಆರೋಪವನ್ನು ಹಿಂತೆಗೆದುಕೊಳ್ಳುವಂತೆ ಕೆಳನ್ಯಾಯಾಲಯವೊಂದಕ್ಕೆ ರಾಜಸ್ಥಾನ ಹೈಕೋರ್ಟ್ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

1998ರಲ್ಲಿ ಜೋಧಪುರದಲ್ಲಿ `ಹಮ್ ಸಾಥ್ ಸಾಥ್ ಹೈ' ಚಿತ್ರದ ಚಿತ್ರೀಕರಣದ ವೇಳೆ ಕಾನ್‌ಕಾನಿ ಎಂಬ ಗ್ರಾಮದ ಬಳಿ ಎರಡು ಕೃಷ್ಣಮೃಗಳನ್ನು ಸಲ್ಮಾನ್ ಹತ್ಯೆಮಾಡಿದ್ದ ಪ್ರಕರಣ ಇದಾಗಿದ್ದು, ಇದರಲ್ಲಿ ಸಲ್ಮಾನ್ ಸೇರಿದಂತೆ ಸೈಫ್ ಅಲಿಖಾನ್, ನಿಲಂ, ಟಬು ಹಾಗೂ ಸೋನಾಲಿ ಬೇಂದ್ರೆ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.