ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವವರು ಪುಸ್ತಕಗಳ ರಾಶಿಯಲ್ಲಿ ಮುಳುಗಿರುವುದನ್ನು ನೋಡುತ್ತೇವೆ. ಆದರೆ, ಈ ಕೂಲಿ ಕಾರ್ಮಿಕ ಪುಸ್ತಕಗಳ ಗೊಡವೆಗೆ ಹೋಗದೇ ಸ್ಮಾರ್ಟ್ಫೋನ್ ಹಾಗೂ ಇಯರ್ಫೋನ್, ವೈ–ಫೈ ನೆರವಿನಿಂದ ಪಾಠ ಆಲಿಸಿ ಕೇರಳ ಲೋಕಸೇವಾ ಆಯೋಗದ (ಕೆಪಿಎಸ್ಸಿ)ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕನಸಿನ ಡಿಜಿಟನ್ ಇಂಡಿಯಾ ಯೋಜನೆಯಡಿ ಎರ್ನಾಕುಲಂ ರೈಲು ನಿಲ್ದಾಣದಲ್ಲಿ 2016ರಲ್ಲಿ ಉಚಿತ ವೈ–ಫೈ ಸೇವೆಯನ್ನು ಆರಂಭಿಸಲಾಗಿದೆ. ಈ ರೈಲು ನಿಲ್ದಾಣದಲ್ಲಿ ಕೂಲಿಯಾಗಿರುವ ಶ್ರೀನಾಥ್ ಕೆ. ಈ ಸೇವೆಯನ್ನು ಸಮರ್ಥವಾಗಿ ಬಳಸಿಕೊಂಡು, ಸರ್ಕಾರಿ ನೌಕರಿ ಸಿಗುವ ಭರವಸೆಯೊಂದಿಗೆ ದಿನದೂಡುತ್ತಿದ್ದಾರೆ.
‘ಕೆಲಸ ಇಲ್ಲದ ಸಮಯದಲ್ಲಿ, ಪ್ರಯಾಣಿಕರ ಲಗೇಜನ್ನು ಹೊತ್ತು ಸಾಗುತ್ತಿರುವಾಗ ಇಯರ್ಫೋನ್ ಮೂಲಕ ಪಾಠ ಆಲಿಸಿ, ಮಾರ್ಗದರ್ಶನ ಪಡೆಯುತ್ತಿದ್ದೆ. ಪ್ರಶ್ನೆಗಳಿಗೆ ಮನದಲ್ಲಿಯೇ ಉತ್ತರಿಸುತ್ತಾ ಹೆಜ್ಜೆ ಹಾಕುತ್ತಿದ್ದೆ’ ಎಂದು ಹೇಳುವ ಶ್ರೀನಾಥ್, ‘ರಾತ್ರಿ ವೇಳೆ ಸಮಯ ಸಿಕ್ಕಾಗ ಎಲ್ಲ ವಿಷಯಗಳನ್ನು ಪುನರ್ಮನನ ಮಾಡುತ್ತಿದ್ದೆ’ ಎಂದು ಶ್ರೀನಾಥ್ ವಿವರಿಸುತ್ತಾರೆ.
ಹೈಸ್ಕೂಲ್ವರೆಗೆ ಶಿಕ್ಷಣ ಪಡೆದಿರುವ ಶ್ರೀನಾಥ್, ಒಂದೊಮ್ಮೆ ಸಂದರ್ಶನದಲ್ಲಿಯೂ ತೇರ್ಗಡೆಯಾಗಿ ನೌಕರಿಗೆ ಅರ್ಹತೆ ಪಡೆದರೆ ‘ವಿಲೇಜ್ ಫೀಲ್ಡ್ ಅಸಿಸ್ಟಂಟ್’ ಹುದ್ದೆಗೆ ನೇಮಕವಾಗುತ್ತಾರೆ.
‘ಪರೀಕ್ಷೆಗೆ ಅಗತ್ಯ ಇರುವ ಅಧ್ಯಯನ ಸಾಮಗ್ರಿ, ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆ, ಇತರ ಪೂರಕ ಮಾಹಿತಿಯನ್ನು 20–40 ಎಂಬಿಪಿಎಸ್ ವೇಗದಲ್ಲಿ ಡೌನ್ಲೋಡ್ ಮಾಡಲು ಸಾಧ್ಯ. ಹೀಗಾಗಿ ರೈಲು ನಿಲ್ದಾಣದಲ್ಲಿ ಲಭ್ಯವಿರುವ ಈ ವೈ–ಫೈ ಸೌಲಭ್ಯದಿಂದ ಹೊಸ ಅವಕಾಶ ತೆರೆದುಕೊಂಡಿತು’ ಎಂದೂ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.