ADVERTISEMENT

ಕೇಂದ್ರದ ಮೇಲೆ ಅಡ್ವಾಣಿ ಕಿಡಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 19:30 IST
Last Updated 4 ಜೂನ್ 2011, 19:30 IST

ಲಖನೌ (ಪಿಟಿಐ): ಕೇಂದ್ರದ ಯುಪಿಎ ಸರ್ಕಾರ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮೇಲೆ ದ್ವೇಷದ ಮತ್ತು ಕಪಟತನದ ಮನೋಭಾವ ವ್ಯಕ್ತಪಡಿಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರು, ಇದರ ವಿರುದ್ಧ ಕಾನೂನು ಬದ್ಧ ಅವಕಾಶಗಳನ್ನು ಬಳಸಿಕೊಂಡು ರಾಜಕೀಯ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಶನಿವಾರ ಕೊನೆಗೊಂಡ ಎರಡು ದಿನಗಳ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಸಮಾರೋಪ ಭಾಷಣ ಮಾಡಿದ ಅವರು, `ದೇಶದ ಗಣತಂತ್ರ ವ್ಯವಸ್ಥೆ ಮೇಲೆ ಯುಪಿಎ ಸರ್ಕಾರ ದಾಳಿ ನಡೆಸುತ್ತಿದೆ. ತನ್ನ ವಿರೋಧಿ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಸರ್ಕಾರಗಳ ವಿರುದ್ಧ ರಾಜ್ಯಪಾಲರನ್ನು ಅದು ಬಳಸಿಕೊಳ್ಳುತ್ತಿರುವುದೇ ಇದಕ್ಕೆ ನಿದರ್ಶನ~ ಎಂದು ಆರೋಪಿಸಿದರು.

`ಕೇಂದ್ರದ ಈ ನೀತಿಯು ಮುಂದುವರಿದರೆ ರಾಜಕೀಯ ಹೋರಾಟದ ಜೊತೆಗೆ ಕಾನೂನುಬದ್ಧ ಹೋರಾಟಕ್ಕೂ ಇಳಿಯಲಾಗುವುದು~ ಎಂದು ಎಚ್ಚರಿಕೆ ನೀಡಿದ ಅವರು, `ವಿದೇಶಗಳಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ವಾಪಸು ತರುವಂತೆ ಈ ಹಿಂದೆಯೇ ಒತ್ತಾಯಿಸಿದ್ದೆ. ಆದರೆ ಈ ವಿಷಯ ಬಾಬಾ ರಾಮ್‌ದೇವ್ ಅವರ ನಿರಶನದಿಂದಾಗಿ ಇದೀಗ ಪ್ರಾಮುಖ್ಯತೆ ಪಡೆದುಕೊಂಡಿದೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.