ADVERTISEMENT

ಕೇಶುಭಾಯಿಗೆ ಆಯೋಗದ ನೋಟಿಸ್

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ರಾಜ್‌ಕೋಟ್ (ಪಿಟಿಐ): ಮತಗಟ್ಟೆಗೆ ಬೆಂಗಾವಲು ಕಾರಿನ ಜತೆ ತೆರಳಿ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಮತ್ತು ಗುಜರಾತ್ ಪರಿವರ್ತನ ಪಕ್ಷದ ಅಧ್ಯಕ್ಷ ಕೇಶುಭಾಯಿ ಪಟೇಲ್ ಅವರಿಗೆ ಚುನಾವಣಾ ಆಯೋಗವು ನೋಟಿಸ್ ನೀಡಿದೆ.

ವಿಶ್ವಧಾರದಿಂದ ರಾಜ್‌ಕೋಟ್‌ಗೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಕೇಶುಭಾಯಿ ಅವರು ಬೆಂಗಾವಲು ಕಾರಿನೊಂದಿಗೆ ಸರಸ್ವತಿ ಶಿಶು ಮಂದಿರ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ಬೆಂಗಾವಲು ಕಾರನ್ನು ಮತಗಟ್ಟೆಯವರೆಗೆ ಒಯ್ಯುವುದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗುವುದರಿಂದ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ ಚಲಾಯಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಕೇಶುಭಾಯಿ ಅವರು, ` ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದರಿಂದ ತಮ್ಮ ಪಕ್ಷವು ಸ್ಪಷ್ಟ ಬಹುಮತದಿಂದ ಸರ್ಕಾರ ರಚಿಸಲಿದೆ' ಎಂದು ಹೇಳಿದರು.

ಗುಜರಾತ್ ಮೊದಲ ಹಂತದ ಚುನಾವಣೆ ಶೇ 67 ಮತದಾನ
ರಾಜ್‌ಕೋಟ್/ಅಹಮದಾಬಾದ್ (ಪಿಟಿಐ): ಗುಜರಾತ್ ವಿಧಾನಸಭೆಗೆ ಗುರುವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇಕಡಾ 67ರಷ್ಟು ದಾಖಲೆ ಮೊತ್ತದ ಮತದಾನ ಆಗಿದೆ.

ರಾಜ್ಯದ ರಾಜಕೀಯ ಪ್ರಮುಖರಾದ ಕೇಶುಭಾಯಿ ಪಟೇಲ್, ಅರ್ಜುನ್‌ಮೋಧ್ವಾಡಿಯಾ, ಆರ್.ಸಿ. ಫಲ್ದು ಅವರ ಭವಿಷ್ಯ ಮತಪೆಟ್ಟಿಗೆಗೆ ಸೇರಿದೆ.

ಒಟ್ಟು 182 ಕ್ಷೇತ್ರಗಳ ಪೈಕಿ 87 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನಡೆದ ಚುನಾವಣೆ ಶಾಂತಿಯುತವಾಗಿತ್ತು. ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.  ಎರಡನೇ ಹಂತದ ಚುನಾವಣೆಯು ಈ 17ರಂದು ನಡೆಯಲಿದ್ದು 20ರಂದು ಫಲಿತಾಂಶ ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT