ADVERTISEMENT

ಕೊಚ್ಚಿ: ರನ್‌ವೇ ಬಿಟ್ಟ ವಿಮಾನ; ತಪ್ಪಿದ ಭಾರಿ ದುರಂತ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2011, 19:30 IST
Last Updated 29 ಆಗಸ್ಟ್ 2011, 19:30 IST
ಕೊಚ್ಚಿ: ರನ್‌ವೇ ಬಿಟ್ಟ ವಿಮಾನ; ತಪ್ಪಿದ ಭಾರಿ ದುರಂತ
ಕೊಚ್ಚಿ: ರನ್‌ವೇ ಬಿಟ್ಟ ವಿಮಾನ; ತಪ್ಪಿದ ಭಾರಿ ದುರಂತ   

ಕೊಚ್ಚಿ (ಪಿಟಿಐ): ಗಲ್ಫ್ ಏರ್‌ವೇಸ್‌ನ ವಿಮಾನವೊಂದು ಸೋಮವಾರ ಬೆಳಗಿನ ಜಾವ ಇಲ್ಲಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್‌ವೇ ಬಿಟ್ಟು ಚಲಿಸಿದ ಪರಿಣಾಮವಾಗಿ, ಏಳು ಪ್ರಯಾಣಿಕರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.

ವಿಮಾನ ಮುಂಜಾನೆ 3.55ರಲ್ಲಿ ಬಹರೇನ್‌ನಿಂದ ಆಗಮಿಸಿದ ಸಂದರ್ಭದಲ್ಲಿ  ಈ ಘಟನೆ ಸಂಭವಿಸಿದೆ. 137 ಪ್ರಯಾಣಿಕರು, 6 ಸಿಬ್ಬಂದಿ ಸೇರಿದಂತೆ 143 ಜನರಿದ್ದ ವಿಮಾನಕ್ಕೆ ಹೆಚ್ಚಿನ ಅನಾಹುತ ಆಗದೆ, ಭಾರಿ ಅಪಾಯವೊಂದು ತಪ್ಪಿದಂತಾಗಿದೆ.

ವಿಮಾನ ರನ್‌ವೇ ಪಥದಿಂದ ಜಾರಿ ಪಕ್ಕದ ಕೆಸರಿನಲ್ಲಿ ಸಿಲುಕಿಕೊಂಡಿದ್ದರಿಂದ ಮುಂಭಾಗ ಮತ್ತು ಗಾಲಿಗಳು ಜಖಂಗೊಂಡಿವೆ. ಮೂಳೆ ಮುರಿದಿರುವ ಪ್ರಯಾಣಿಕರೊಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಉಳಿದ ಆರು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ.

ಘಟನೆಯಿಂದ ಗಾಬರಿಗೊಂಡ ಕೆಲವು ಪ್ರಯಾಣಿಕರು ತುರ್ತು ನಿರ್ಗಮನದ ಮೂಲಕ ಹೊರಗೆ ಹಾರಿದರು. ಉಳಿದವರು ಗಾಳಿ ತುಂಬಿದ ಏಣಿಗಳ ಮೂಲಕ ಹೊರಬಂದರು.

ಸಂಚಾರಕ್ಕೆ ಅಡಚಣೆ: ಹತ್ತು ತಾಸಿಗೂ ಹೆಚ್ಚು ಕಾಲ ರನ್‌ವೇ ಮುಚ್ಚಲಾಗಿತ್ತು. ಹೀಗಾಗಿ ಕೊಚ್ಚಿಗೆ ಆಗಮಿಸುವ ಎಲ್ಲ ವಿಮಾನಗಳನ್ನೂ ತಿರುವನಂತಪುರ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಿಗೆ ಕಳುಹಿಸಲಾಯಿತು. ಕೊಚ್ಚಿಯಿಂದ ಕೊಲ್ಲಿ ರಾಷ್ಟ್ರಗಳಿಗೆ ತೆರಳಬೇಕಿದ್ದ ಮೂರು ವಿಮಾನಗಳ ಸಂಚಾರ ಹಲವಾರು ತಾಸು ವಿಳಂಬವಾಯಿತು.

ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಧಾರಾಕಾರ ಮಳೆ ಸುರಿಯುತ್ತಿರುವುದು ಕಾರಣ ಇರಬಹುದು ಎಂದು ಶಂಕಿಸಲಾಗಿದೆ.  ತನಿಖೆಗೆ ಆದೇಶಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.