ADVERTISEMENT

ಕ್ರಿಯಾಯೋಜನೆ ರೂಪಿಸಲು ಸಂಸದೀಯ ಸಮಿತಿ ಸಲಹೆ

ಅಪೌಷ್ಟಿಕತೆ: ಸರ್ಕಾರದಲ್ಲಿ ಮಾಹಿತಿ ಕೊರತೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2013, 19:59 IST
Last Updated 8 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಅಪೌಷ್ಟಿಕತೆಯ ಕುರಿತು ಸರ್ಕಾರ ನೀಡಿರುವ ಮಾಹಿತಿ `ಹಳತು' ಎನಿಸಿದ್ದು ಈ ಕುರಿತು ಕಾಲಮಿತಿಯ ಕ್ರಿಯಾ ಯೋಜನೆ ಹಾಕಿಕೊಳ್ಳುವ ಮೂಲಕ ಸರ್ಕಾರ ಅಪೌಷ್ಟಿಕತೆಯ ಪ್ರಮಾಣವನ್ನು ಕಡಿಮೆಗೊಳಿಸಲು ಯತ್ನಿಸಬೇಕು ಎಂದು ಸಂಸದೀಯ ಸಮಿತಿ ಸಲಹೆ ನೀಡಿದೆ.

`ಮಾಹಿತಿ ತಂತ್ರಜ್ಞಾನದ ಇಂದಿನ ಆಧುನಿಕ ಕಾಲದಲ್ಲೂ ಅಪೌಷ್ಟಿಕತೆಯ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗುತ್ತಿಲ್ಲ ಎನ್ನುವ ವಿಚಾರ ನಿಜಕ್ಕೂ ನಮಗೆ ಆಶ್ಚರ್ಯ ಮೂಡಿಸಿದೆ. ಈ ಸಂಬಂಧ ಈಗ ಇರುವ ಮಾಹಿತಿ ಏಳು ವರ್ಷಗಳಷ್ಟು ಹಿಂದಿನದಾಗಿದ್ದು ಅದೆಲ್ಲ ಹಳತು ಎನಿಸಿಕೊಂಡಿದೆ' ಎಂದು ಸಮಿತಿ ತಿಳಿಸಿದೆ.

`ಅಪೌಷ್ಟಿಕತೆ ಹಾಗೂ ತಾಯಂದಿರಲ್ಲಿನ ಶಿಶು' ಹೆಸರಿನಲ್ಲಿ ಸಂಸತ್ತಿನಲ್ಲಿ ವರದಿ ಮಂಡಿಸಿದ ಸಮಿತಿ, ಮಕ್ಕಳ ಆರೋಗ್ಯದ ಕುರಿತಾಗಿ ಇತ್ತೀಚಿನ ಅಂಕಿಸಂಖ್ಯೆ ಲಭ್ಯವಾಗದಿರುವ ಕುರಿತು ಕಳವಳ ವ್ಯಕ್ತಪಡಿಸಿದೆ. `ದೇಶದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಅಪೌಷ್ಟಿಕತೆ ದೊಡ್ಡ ಅಡ್ಡಿ ಎನಿಸಿದ್ದು ಮಹಿಳೆ, ಮಕ್ಕಳು, ವಯಸ್ಕರು ಸೇರಿದಂತೆ ಇಡೀ ದುಡಿಯುವ ವರ್ಗದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಅಂಗನವಾಡಿ ಕೇಂದ್ರಗಳ ಗಣಕೀಕರಣ ಕೈಗೊಳ್ಳುವುದರ ಜತೆಯಲ್ಲಿ ಅಪೌಷ್ಟಿಕತೆ ಕಡಿಮೆಗೊಳಿಸುವ ಕಾರ್ಯಕ್ರಮಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ' ಎಂದೂ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT