ADVERTISEMENT

ಖುರ್ಷಿದ್ ವಿರುದ್ಧ ಎಫ್‌ಐಆರ್‌ಗೆ ಪಟ್ಟು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 19:30 IST
Last Updated 13 ಅಕ್ಟೋಬರ್ 2012, 19:30 IST
ಖುರ್ಷಿದ್ ವಿರುದ್ಧ ಎಫ್‌ಐಆರ್‌ಗೆ ಪಟ್ಟು
ಖುರ್ಷಿದ್ ವಿರುದ್ಧ ಎಫ್‌ಐಆರ್‌ಗೆ ಪಟ್ಟು   

ನವದೆಹಲಿ (ಪಿಟಿಐ): ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ವಜಾಕ್ಕೆ ಆಗ್ರಹಿಸಿ ಶುಕ್ರವಾರ ಧರಣಿ ನಡೆಸಲು ಪ್ರಧಾನಿ ನಿವಾಸದತ್ತ ಹೋಗುತ್ತಿದ್ದಾಗ ಬಂಧನಕ್ಕೆ ಒಳಗಾಗಿದ್ದ ಸಾಮಾಜಿಕ ಕಾರ್ಯಕರ್ತ ಕೇಜ್ರಿವಾಲ್ ಮತ್ತು ಅವರ ಬೆಂಬಲಿಗರನ್ನು ಶನಿವಾರ ಬಿಡುಗಡೆ ಮಾಡಲಾಯಿತು.

ಜೈಲಿನಿಂದ ಸೀದಾ ಸಂಸತ್ ಭವನ ರಸ್ತೆಗೆ ತೆರಳಿದ ಅವರು, ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದ `ಭ್ರಷ್ಟಾಚಾರ ವಿರೋಧಿ ಭಾರತ ಆಂದೋಲನ~ವನ್ನು ಸೇರಿಕೊಂಡರು. ಖುರ್ಷಿದ್‌ರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಹಾಗೂ ಖುರ್ಷಿದ್ ದಂಪತಿ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.

ಸಚಿವ ಸಲ್ಮಾನ್ ಖುರ್ಷಿದ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, `ನಮಗೆ ಭ್ರಷ್ಟಾಚಾರ ರಹಿತ ಸಚಿವರು ಬೇಕೇ ಹೊರತು, ಖುರ್ಷಿದ್ ತರಹದವರು ಅಲ್ಲ. ಅವರು ಸಚಿವರಾಗಿ ಮುಂದುವರಿದರೆ ಸಾಕ್ಷ್ಯಗಳನ್ನು ನಾಶ ಮಾಡುತ್ತಾರೆ~ ಎಂದು ಆಪಾದಿಸಿದರು.

`ಕೇಜ್ರಿವಾಲ್ ರಾಜಕೀಯ~: ಖುರ್ಷಿದ್ ಮುಖ್ಯಸ್ಥರಾಗಿರುವ ಸ್ವಯಂ ಸೇವಾ ಸಂಸ್ಥೆಯ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬ ಆರೋಪವು ನಿರಾಧಾರ, ಕೊಂಕು ಮಾತು~ ಎಂದಿರುವ ಖುರ್ಷಿದ್ ಅವರ ಪತ್ನಿ ಲೂಯಿ ಖುರ್ಷಿದ್, `ಅರವಿಂದ ಕೇಜ್ರಿವಾಲ್ ಅಂಗವಿಕಲರನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ~ ಎಂದು ಟೀಕಿಸಿದ್ದಾರೆ.

`ಖುರ್ಷಿದ್ ರಾಜೀನಾಮೆ ನೀಡಲು ಕಾರಣವೇ ಇಲ್ಲ. ಅವರು ಯಾವುದೇ ವಿಚಾರಣೆಗೆ ಗುರಿಯಾಗಿಲ್ಲ~ ಎಂದಿದ್ದಾರೆ.
`ಅಷ್ಟಕ್ಕೂ ಅವ್ಯವಹಾರ ನಡೆದಿದೆ ಎಂದು ಮಹಾಲೇಖಪಾಲರು (ಸಿಎಜಿ) ವರದಿ ನೀಡಿಲ್ಲ. ಆದಾಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಕೇಜ್ರಿವಾಲ್ ಅವರಿಗೆ ಯಾವುದು ಸಿಎಜಿ ವರದಿ, ಯಾವುದು ಸಿಎಜಿ ವರದಿ ಅಲ್ಲ ಎನ್ನುವ ಪರಿಜ್ಞಾನ ಇಲ್ಲವೇ~ ಎಂದೂ ಪ್ರಶ್ನಿಸಿದ್ದಾರೆ.

`ಟ್ರಸ್ಟ್ ಮೂಲಕ ಸಾವಿರಾರು ಅಂಗವಿಕಲರಿಗೆ ಸಾಧನ- ಸಲಕರಣೆಗಳನ್ನು ವಿತರಿಸಿ ನೆರವು ನೀಡಲಾಗಿದೆ. ಕೇವಲ ಮೂರ‌್ನಾಲ್ಕು ಮಂದಿ ತಮಗೆ ಏನನ್ನೂ ನೀಡಿಲ್ಲ ಎಂದ ಮಾತ್ರಕ್ಕೆ ಅವ್ಯವಹಾರ ನಡೆದಿದೆ ಎಂದರ್ಥವಲ್ಲ. ಟ್ರಸ್ಟ್ ಒಂದೇ ಎಲ್ಲವನ್ನೂ ಮಾಡಲು ಆಗದು. ಶಾಸಕರಾದ ವಿವೇಕ್ ಬನ್ಸಲ್, ಜಿತಿನ್ ಪ್ರಸಾದ್ ಅವರೇ ಮುಂದೆ ನಿಂತು ಅನೇಕ ಕಡೆ ಶಿಬಿರಗಳನ್ನು ಏರ್ಪಡಿಸಿದ್ದರು. ಅಲ್ಲೂ ಸಾಧನ, ಸಲಕರಣೆಗಳನ್ನು ವಿತರಿಸಲಾಗಿದೆ~ ಎಂದು ವಿವರಿಸಿದ್ದಾರೆ.

ಟ್ರಸ್ಟ್ ಅವ್ಯವಹಾರ ಕುರಿತು ಪ್ರಸಾರ ಮಾಡುತ್ತಿರುವ ಟಿವಿ ವಾಹಿನಿ ವಿರುದ್ಧ ಕಿಡಿಕಾರಿರುವ ಅವರು, ವಾಹಿನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿ ತಿಳಿಸಿದರು.

ಬೇಡಿ ಒತ್ತಾಯ: ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಕಿರಣ್ ಬೇಡಿ ಅವರು, `ಸಿಎಜಿ ವರದಿಯಲ್ಲಿ ಅವ್ಯವಹಾರ ನಡೆದಿರುವ ಉಲ್ಲೇಖವಿದೆ. ಪ್ರಧಾನಿ ಅವರು ಈಗಲಾದರೂ ಈ ಹಗರಣದ ಬಗ್ಗೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು~ ಎಂದರು.

ಈ ಹಗರಣ ಆರೋಪ ಕುರಿತು ತನಿಖೆಗೆ ಆದೇಶಿಸಲು ಉತ್ತರ ಪ್ರದೇಶ ಸರ್ಕಾರ ಚಿಂತನೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.