ADVERTISEMENT

ಗದ್ದಲ: ನಡೆಯದ ಸಂಸತ್‌ ಕಲಾಪ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 19:30 IST
Last Updated 11 ಡಿಸೆಂಬರ್ 2013, 19:30 IST

ನವದೆಹಲಿ (ಐಎಎನ್‌ಎಸ್‌):  ತೆಲಂಗಾಣ ರಾಜ್ಯ ರಚನೆ ಹಾಗೂ ಬೆಲೆ ಏರಿಕೆ ವಿಷಯವಾಗಿ ಬುಧವಾರವೂ ಸಂಸತ್‌ನ ಉಭಯ ಸದನಗಳಲ್ಲಿ ವಿರೋಧ ಪಕ್ಷದ ಸದಸ್ಯರು ಗದ್ದಲ ಎಬ್ಬಿಸಿದ್ದರಿಂದ ಕಲಾಪ ಮುಂದೂಡಬೇಕಾಯಿತು.

ದಿನದ ಕಲಾಪ ಆರಂಭವಾಗು­ತ್ತಲೇ ಸರ್ಕಾರದ ವಿರುದ್ಧ ಸದಸ್ಯರು ಘೋಷಣೆ ಕೂಗಲು ಆರಂಭಿ­ಸಿದರು. ಹಾಗಾಗಿ ಪ್ರಶ್ನೋತ್ತರ ಅವಧಿ ಬುಧವಾರವೂ ವ್ಯರ್ಥವಾಯಿತು.

ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ವಿರೋಧ ವ್ಯಕ್ತಪಡಿಸಿ ಆಂಧ್ರ­ಪ್ರದೇಶದ ಸೀಮಾಂಧ್ರ ಭಾಗದ ಸದಸ್ಯರು ಲೋಕಸಭೆಯಲ್ಲಿ ಘೋಷಣೆ ಕೂಗಲು ಆರಂಭಿಸಿದಾಗ ಗದ್ದಲ ನಿಯಂತ್ರಣಕ್ಕೆ ಬರಲಿಲ್ಲ.

ಆಹಾರ ದಾನ್ಯಗಳ ಬೆಲೆ ಏರಿಕೆ ಹಾಗೂ ಕೋಮುಗಲಭೆಗೆ ಒಳಗಾದ ಉತ್ತರ ಪ್ರದೇಶದ ಮುಜಪ್ಫರ್‌ನಗರ ನಿರಾಶ್ರಿತರ ಶಿಬಿರದಲ್ಲಿಯ ಮಕ್ಕಳು ಸಾವಿಗೀಡಾಗಿರುವ ವಿಷಯ ಪ್ರಸ್ತಾಪಿಸಿದ ಸದಸ್ಯರು ಸರ್ಕಾರದ ವಿರುದ್ಧ ಹರಿಹಾಯ್ದರು.

ಮಧ್ಯಾಹ್ನವೂ ಸದಸ್ಯರು ಪ್ರತಿಭಟನೆ ನಿಲ್ಲಿಸದೇ ಇದ್ದಾಗ ಲೋಕಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. 
ರಾಜ್ಯಸಭೆಯಲ್ಲೂ ಇದೇ ಸ್ಥಿತಿ ತಲೆದೋರಿದಾಗ ಸಭಾಪತಿ ಎಂ. ಹಮೀದ್‌ ಅನ್ಸಾರಿ ಮಧ್ಯಾಹ್ನದವರೆಗೆ ಕಲಾಪ ಮುಂದೂಡಿದರು.

2ಜಿ ತರಂಗಾಂತರ ಹಗರಣ ಕುರಿತು ಜೆಪಿಸಿ ನೀಡಿದ ವರದಿ, ತಮಿಳು ಮೀನುಗಾರರ ಮೇಲೆ ಶ್ರೀಲಂಕಾ ನೌಕಾ ಸಿಬ್ಬಂದಿ ನಡೆಸಿರುವ ದಾಳಿಯ ವಿಷಯಗಳೂ ಕೋಲಾಹಲಕ್ಕೆ ಕಾರಣವಾದವು.

ಇತರ ಹಿಂದುಳಿದ ವರ್ಗದ (ಒಬಿಸಿ) ವ್ಯಾಪ್ತಿಗೆ ಇನ್ನೂ 17 ಜಾತಿಗಳನ್ನು ಸೇರಿಸಲು ಒತ್ತಾಯಿಸಿ ಬಿಎಸ್‌ಪಿ ಸದಸ್ಯರು ಮಧ್ಯಾಹ್ನವೂ ರಾಜ್ಯಸಭೆ ಯಲ್ಲಿ ಪ್ರತಿಭಟನೆ ನಡೆಸಿದಾಗ ಇದಕ್ಕೆ ಸಮಾಜವಾದಿ ಪಕ್ಷದ ಸದಸ್ಯರೂ ಕೈಜೋಡಿಸಿದರು.

2ಜಿ ತರಂಗಾಂತರ ಹಂಚಿಕೆ ಕುರಿತು ಜೆಪಿಸಿ ಸಂಸತ್‌ನಲ್ಲಿ ವರದಿ ಮಂಡಿಸಿದ್ದು ಈ ಕುರಿತು ಚರ್ಚೆ ನಡೆಯಬೇಕು ಎಂದು ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ಆಗ್ರಹಿಸಿದರು.

ಅತ್ಯಲ್ಪ ಅವಧಿಯ ಸಂಸತ್‌ನ ಚಳಿಗಾಲದ ಅಧಿವೇಶನ ಆರಂಭವಾಗಿ ಐದು ದಿನಗಳಾದರೂ ಯಾವುದೇ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.