ನವದೆಹಲಿ: ಗಾಂಧಿ ಜಯಂತಿಯಂದು ‘ಸ್ವಚ್ಛ ಭಾರತ್ ಅಭಿಯಾನ’ ನಡೆಸುವ ಮೂಲಕ ಕೇಂದ್ರ ಸರ್ಕಾರ ಗಾಂಧೀಜಿಗೆ ಗೌರವ ನೀಡುತ್ತಿದ್ದರೆ, ಭಾರತೀಯ ರೈಲ್ವೆ ಇಲಾಖೆ ಗಾಂಧಿ ಜನ್ಮ ದಿನ ರೈಲುಗಳಲ್ಲಿ ಶುದ್ಧ ಸಸ್ಯಾಹಾರ ವಿತರಣೆ ಮಾಡಲು ನಿರ್ಧರಿಸಿದೆ.
ಕಳೆದ ತಿಂಗಳೇ ಎಲ್ಲ ರೈಲ್ವೆ ವಲಯಗಳಿಗೂ ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದೆ. ಅಲ್ಲದೆ, ‘ಸಸ್ಯಾಹಾರ ದಿನ’ವನ್ನು ಸರಿಯಾಗಿ ಆಚರಿಸುವಂತೆ ರೈಲ್ವೆ ಇಲಾಖೆ ಎಲ್ಲ ಸಿಬ್ಬಂದಿಗೂ ಸೂಚಿಸಲಾಗಿದೆ ಎಂದು ರೈಲ್ವೆ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಜತೆಗೆ ಗಾಂಧೀಜಿಯವರ 150ನೇ ಜನ್ಮ ವರ್ಷವನ್ನು ಸ್ಮರಣೀಯವಾಗಿ ಆಚರಿಸಲು ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ರೂಪುರೇಷೆಯನ್ನು ಸಿದ್ಧಪಡಿಸಲಾಗಿದೆ. ದಂಡಿ ಸತ್ಯಾಗ್ರಹ ಸ್ಮರಣಾರ್ಥ ಸಾಬರಮತಿಯಿಂದ ವಿವಿಧ ನಿಲ್ದಾಣಗಳನ್ನು ಸಂಪರ್ಕಿಸುವಂತೆ ‘ದಂಡಿ ಸತ್ಯಾಗ್ರಹ’ ಮತ್ತು ‘ಸ್ವಚ್ಛತಾ ಎಕ್ಸ್ಪ್ರೆಸ್’ ರೈಲುಗಳ ಸಂಚಾರ ನಡೆಸಲಾಗುವುದು. ಜಲವರ್ಣದ ಗಾಂಧಿ ಚಿತ್ರವನ್ನು ಒಳಗೊಂಡ ಟಿಕೆಟ್ಗಳನ್ನು ಪ್ರಯಾಣಿಕರಿಗೆ ನೀಡಲು ನಿರ್ಧರಿಸಲಾಗಿದೆ. ಈ ಪ್ರಸ್ತಾವಕ್ಕೆ ಸಂಸ್ಕೃತಿ ಸಚಿವಾಲಯದ ಅನುಮತಿ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.