ಗಾಜಿಪುರ, ಉತ್ತರ ಪ್ರದೇಶ: ಆರ್ಎಸ್ಎಸ್ ಕಾರ್ಯಕರ್ತ ರಾಜೇಶ್ ಮಿಶ್ರಾ (40) ಎಂಬುವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ರಾಜೇಶ್ ಅವರನ್ನು ಉಳಿಸಲು ಯತ್ನಿಸಿದ ಸೋದರನಿಗೂ ಗಾಯಗಳಾಗಿವೆ.
ಪತ್ರಕರ್ತರೂ ಆಗಿರುವ ರಾಜೇಶ್ ತಮ್ಮ ಸಹೋದರ ಅಮಿತೇಶ್ ಮಿಶ್ರಾ ಜೊತೆ ಶುಕ್ರವಾರ ಬೆಳಗ್ಗೆ ಇಲ್ಲಿನ ಬ್ರಾಹ್ಮಣಪುರ ಛತ್ತಿಯ ಅಂಗಡಿಯಲ್ಲಿ ಕುಳಿತಿದ್ದಾಗ ಮೂವರು ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜೇಶ್ ಅವರ ತಲೆಗೆ ಹಾಗೂ ಅಮಿತೇಶ್ ಅವರ ಹೊಟ್ಟೆಗೆ ಗುಂಡು ತಾಗಿದೆ. ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ರಾಜೇಶ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಅಮಿತೇಶ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ವಾರಾಣಸಿಗೆ ಕರೆದೊಯ್ಯಲು ಸೂಚಿಸಲಾಯಿತು.
ಹಂತಕರ ಪೈಕಿ ಇಬ್ಬರ ಗುರುತು ಪತ್ತೆಯಾಗಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸುವುದಾಗಿ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿ ಆನಂದ್ ಕುಮಾರ್ ಅವರು ಲಖನೌದಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.