ಅಹಮದಾಬಾದ್: ಇಲ್ಲಿನ ಅಸರ್ವದ ಬಳಿ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ 24 ಗಂಟೆಗಳಲ್ಲಿ 9 ನವಜಾತ ಶಿಶುಗಳು ಮೃತಪಟ್ಟಿವೆ. ಅಲ್ಲದೆ ಮೂರು ದಿನದಲ್ಲಿ ಸೌಲಭ್ಯದ ಕೊರತೆಯಿಂದ ಒಟ್ಟು 18 ಶಿಶುಗಳು ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ. ಈ ಘಟನೆ ಬಗ್ಗೆ ಸಿಎಂ ತನಿಖೆಗೆ ಆದೇಶಿಸಿದ್ದಾರೆ.
ಕೆಲವು ಮಕ್ಕಳು ಕಡಿಮೆ ತೂಕ ಹಾಗೂ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಕಳುಹಿಸಿದ ಕಾರಣಗಳಿಂದ ಮೃತಪಟ್ಟಿವೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿಗಳು ಹೇಳಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯ ಮೇಲ್ವಿಚಾರಕ ಡಾ.ಎಂ.ಎಂ. ಪ್ರಭಾಕರ್ ಅವರು, ‘ಶಿಶುಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟ ವೇಳೆ ಅಲ್ಲಿನ ಬಹುತೇಕ ಸಿಬ್ಬಂದಿ ದೀಪಾವಳಿ ಹಬ್ಬದ ಪ್ರಯುಕ್ತ ಊರಿಗೆ ತೆರಳಿದ್ದರು. ಅಲ್ಲದೆ ಮೃತಪಟ್ಟ ಹೆಚ್ಚಿನ ಮಕ್ಕಳು ಒಂದು ಕೆಜಿಗಿಂತ ಕಡಿಮೆ ಇದ್ದವು. ಆಮ್ಲಜನಕದ ಕೊರತೆಯಿಂದ ಯಾವುದೆ ಮಕ್ಕಳು ಮೃತಪಟ್ಟಿಲ್ಲ’ ಎಂದು ಹೇಳಿದ್ದಾರೆ.
ಶಿಶುಗಳ ಸಾವಿನ ಬಗ್ಗೆ ಸ್ಪಷ್ಟನೆ ನೀಡಿದ ಆರೋಗ್ಯಾಧಿಕಾರಿ ಡಾ.ಜಯಂತಿ ರವಿ, 'ಆಸ್ಪತ್ರೆಯಲ್ಲಿ ನಡೆದ ಶಿಶುಗಳ ಸಾವಿನ ಬಗ್ಗೆ ವಿಚಾರಿಸುತ್ತಿದ್ದೇನೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಶಿಶುಗಳುನ್ನು ಬೇರೆ ಆಸ್ಪತ್ರೆಗೆ ಕಳುಹಿಸಿದ ನಂತರ ಮೃತಪಟ್ಟಿವೆ. ಕೆಲವು ಶಿಶುಗಳು ರಕ್ತ ಹೆಪ್ಪುಗಟ್ಟುವಿಕೆ, ರಕ್ತ ವಿಷವಾಗುವಿಕೆಯಿಂದ ಪ್ರಾಣಕಳೆದುಕೊಂಡಿವೆ. ಇದು ಬಹುದೊಡ್ಡ ಅನಾಹುತ. ಇದರ ಬಗ್ಗೆ ವರದಿ ಸಂಗ್ರಹಿಸುತ್ತೇನೆ' ಎಂದಿದ್ದಾರೆ.
ಇದರ ಬಗ್ಗೆ ಕೆಲವು ಮುಖ್ಯ ಅಧಿಕಾರಿಗಳ ಜತೆ ಸಭೆ ನಡೆಸಿದ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ತನಿಖೆಗೆ ಆದೇಶಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.