ADVERTISEMENT

ಗುಜರಾತ್: ಲಾರಿ ಹರಿದು 20 ಯಾತ್ರಿಗಳ ಸಾವು

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 10:25 IST
Last Updated 9 ಜೂನ್ 2011, 10:25 IST

ಅಹ್ಮದಾಬಾದ್, (ಐಎಎನ್ಎಸ್): ಬೀದಿಯ ಅಂಚಿನಲ್ಲಿ ಮಲಗಿದ್ದ ಯಾತ್ರಿಗಳ ಮೇಲೆ ಲಾರಿಯೊಂದು ಹರಿದ ಪರಿಣಾಮ 20 ಮಂದಿ ಮೃತರಾದ ದಾರುಣ ಘಟನೆ ಇಲ್ಲಿಗೆ 80 ಕಿ.ಮೀ ದೂರದ ಧೊಲ್ಕಾ ಪಟ್ಟಣದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.

ಮೃತರಲ್ಲಿ ಒಂಬತ್ತು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ. ಈ ದುರ್ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಗುಜರಾತಿನ ಸಬರಕಂಥದಿಂದ ಪಾದಯಾತ್ರೆಯಲ್ಲಿ ಹಜರತ್ ಪೀರ್ ಸೈಯದ್ ಅಹ್ಮದ್ ಶಾ ಭುಕಾರಿ ಅವರ ಪವಿತ್ರಕ್ಷೇತ್ರದಲ್ಲಿನ ವಾರ್ಷಿಕ ಉತ್ಸವದಲ್ಲಿ ಭಾಗವಹಿಸಲು ಹೊರಟಿದ್ದ ಈ ಯಾತ್ರಿಗಳು ದಣಿವಾರಿಸಿಕೊಳ್ಳಲು ಧೊಲ್ಕಾ ಪಟ್ಟಣದ ಬೀದಿಯಲ್ಲಿ ಮಲಗಿದ್ದರು ಎನ್ನಲಾಗಿದೆ.  

ADVERTISEMENT

ಲಾರಿಯ ಗಾಲಿಯೊಂದರಲ್ಲಿ ಗಾಳಿಯ ಒತ್ತಡ ಹೆಚ್ಚಾಗಿ ಅದು ಸಿಡಿದಾಗ ಚಾಲಕ ಲಾರಿಯ ನಿಯಂತ್ರಣ ಕಳೆದುಕೊಂಡ. ಆಗ ಅದು ರಸ್ತೆ ಬದಿ ಮಲಗಿದ್ದ ಯಾತ್ರಿಗಳ ಮೇಲೆ ಹರಿಯಿತೆಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಲಾರಿ ಚಾಲಕ ಪರಾರಿಯಾಗಿದ್ದಾನೆ.

ಪರಿಹಾರ: ಗುಜರಾತಿನ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಮೃತರಾದವರ ಕುಟುಂಬದವರಿಗೆ ತಲಾ ಒಂದು ಲಕ್ಷ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ.

 ರಾಜಸ್ಥಾನ, ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳಿಂದ ಯಾತ್ರಿಗಳು  ಪ್ರತಿ ವರ್ಷವೂ ಕಾಲ್ನಡಿಗೆಯಲ್ಲಿ ಬಂದು ಹಜರತ್ ಪೀರ್ ಸೈಯದ್ ಅಹ್ಮದ್ ಶಾ ಭುಕಾರಿ ಅವರ ಪವಿತ್ರಕ್ಷೇತ್ರದ ವಾರ್ಷಿಕ ಉತ್ಸವದಲ್ಲಿ ಭಾಗವಹಿಸುವುದು ವಾಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.