ಪಣಜಿ : ಗೋವಾ ವಿಮಾನ ನಿಲ್ದಾಣದ ನಿಷೇಧಿತ ಪ್ರದೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಾರ್ವಜನಿಕ ಸಭೆ ನಡೆಸಿದ್ದಾರೆ
ಎಂದು ದೂರಿ ಸಲ್ಲಿಸಲಾಗಿರುವ ರಿಟ್ ಅರ್ಜಿಗೆ ಸಂಬಂಧಿಸಿ ಬಾಂಬೆ ಹೈಕೋರ್ಟ್ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಇತರರಿಗೆ ನೋಟಿಸ್ ನೀಡಿದೆ.
ಅಮಿತ್ ಷಾ ಅವರು ದಾಬೊಲಿಂ ವಿಮಾನ ನಿಲ್ದಾಣದಲ್ಲಿ ಈ ತಿಂಗಳ 1ರಂದು ಸಾರ್ವಜನಿಕ ಸಭೆ ನಡೆಸಿದ್ದಾರೆ ಎಂದು ದೂರಿ ಸಾಮಾಜಿಕ ಕಾರ್ಯಕರ್ತ ಐರಿಸ್ ರಾಡ್ರಿಗಸ್ ಅವರು ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ಎಫ್.ಆರ್. ರೆಯಿಸ್ ಮತ್ತು ನೂತನ್ ಸರ್ದೇಸಾಯಿ ಅವರನ್ನು ಒಳಗೊಂಡ ಪೀಠವು ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ, ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ, ವಿಮಾನ ನಿಲ್ದಾಣದ ನಿರ್ದೇಶಕ ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಉಪ ಕಮಾಂಡಂಟ್ ಅವರಿಗೆ ನೋಟಿಸ್ ನೀಡಿದೆ. ಮೂರು ವಾರಗಳಲ್ಲಿ ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಲಾಗಿದೆ.
ವಿಮಾನ ನಿಲ್ದಾಣದ ನಿಷೇಧಿತ ಪ್ರದೇಶದಲ್ಲಿ ಸಾರ್ವಜನಿಕ ಸಭೆ ನಡೆಸಿರುವುದು ಕಾನೂನು ಬಾಹಿರ, ಇಂತಹ ಸಭೆ ನಡೆಸಲು ಅವಕಾಶ ಮಾಡಿಕೊಡುವ ಮೂಲಕ ಪ್ರತಿವಾದಿಗಳು ಕಾನೂನಿಗೆ ವಿರುದ್ಧವಾಗಿ ನಡೆದು ಕೊಂಡಿದ್ದಾರೆ ಎಂದು ಅರ್ಜಿದಾರರು ಹೇಳಿದ್ದಾರೆ.
ಅಮಿತ್ ಷಾ ಅವರು ವಿಮಾನ ನಿಲ್ದಾಣದ ನಿಷೇಧಿತ ಪ್ರದೇಶದಲ್ಲಿ ನಡೆಸಿದ ಸಭೆಯಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮತ್ತು ಕೇಂದ್ರ ಸಚಿವ ಶ್ರೀಪಾದ್ ನಾಯ್ಕ ಅವರೂ ಪಾಲ್ಗೊಂಡಿದ್ದರು ಎಂದು ಅರ್ಜಿದಾರರು ತಿಳಿಸಿದ್ದಾರೆ.
ಸಭೆ ನಡೆಸಿದ್ದು ಗೊತ್ತಾದ ಕೂಡಲೇ ರಾಡ್ರಿಗಸ್ ಅವರು ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ಸಲ್ಲಿಸಿ ಕ್ರಮ ತೆಗೆದು
ಕೊಳ್ಳುವಂತೆ ಆಗ್ರಹಪಡಿಸಿದ್ದರು. ಅಕ್ರಮ ಪ್ರವೇಶದ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ಸಹ ಒತ್ತಾಯಿಸಿತ್ತು.
ಸಭೆ ನಡೆಸಲು ಅನುಮತಿ ಪಡೆಯಲಾಗಿತ್ತು, ನಿಲ್ದಾಣದ ಒಳಗಡೆ ಸಭೆ ನಡೆದಿರಲಿಲ್ಲ ಎಂದು ಬಿಜೆಪಿ ಆರಂಭದಲ್ಲಿ ಹೇಳಿತ್ತು. ನಂತರ ಹೇಳಿಕೆ ಬದಲಿಸಿ, ಪೂರ್ವ ನಿರ್ಧರಿತ ಸಭೆ ಆಗಿರಲಿಲ್ಲ, ಪಕ್ಷದ ಅಧ್ಯಕ್ಷರಿಗೆ ಸ್ವಾಗತ ಕೋರಲು ದೊಡ್ಡ ಸಂಖ್ಯೆಯ ಕಾರ್ಯಕರ್ತರು ನೆರೆದಿದ್ದರು ಎಂದು ತಿಳಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.