ನವದೆಹಲಿ: ‘ಗೋ ರಕ್ಷಣೆಯ ಹೆಸರಿನಲ್ಲಿ ಅಲ್ಪಸಂಖ್ಯಾತರು ಹಾಗೂ ದಲಿತರ ಮೇಲೆ ಹಲ್ಲೆ ನಡೆಸುವವರ ಬಗ್ಗೆ ಸರ್ಕಾರ ಯಾವುದೇ ರೀತಿಯ ಸಹಾನುಭೂತಿ ತೋರುವುದಿಲ್ಲ’ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಗುರುವಾರ ಮಾತನಾಡಿದ ಅವರು, ‘ಗೋ ರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರ ನಡೆಸುವುದು ಸರಿಯಲ್ಲ. ಇಂಥ ಯಾವುದೇ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗುವವರ ಬಗ್ಗೆ ಸರ್ಕಾರ ಸಹಾನುಭೂತಿ ತೋರುವುದಿಲ್ಲ’ ಎಂದಿದ್ದಾರೆ.
ಗೋ ರಕ್ಷಣೆಯ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಗಳನ್ನು ಉಲ್ಲೇಖಿಸಿ ವಿಪಕ್ಷಗಳು ನಡೆಸಿದ ಗದ್ದಲಕ್ಕೆ ಉತ್ತರ ನೀಡಿದ ಜೇಟ್ಲಿ, ‘ಈ ವಿಷಯದ ಬಗ್ಗೆ ಪ್ರಧಾನಮಂತ್ರಿ ಮತ್ತು ಗೃಹ ಸಚಿವರು ಈಗಾಗಲೇ ಮಾತನಾಡಿದ್ದಾರೆ. ಇದನ್ನು ಇನ್ನಷ್ಟು ಬೆಳೆಸುವುದು ಸರಿಯಲ್ಲ’ ಎಂದು ಹೇಳಿದರು.
‘ಗೋವುಗಳ ಬಗ್ಗೆ ನಮಗಿರುವ ಭಾವನೆಯ ಕಾರಣಕ್ಕೆ ಗೋವಿನ ಹೆಸರಿನಲ್ಲಿ ನಡೆಯುವ ಹಿಂಸಾಚಾರಗಳನ್ನು ಒಪ್ಪಲಾಗದು. ನಮ್ಮದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಸೌರ್ಹಾರ್ಧ, ಸಹನೆ ನಮ್ಮ ಸಂಸ್ಕೃತಿ. ಯಾವ ಕಾರಣಕ್ಕೇ ಆಗಲಿ ಯಾವುದೇ ಧರ್ಮದ ನಿಂದನೆ ಸರಿಯಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.