ADVERTISEMENT

ಚೀನಾ- ಭಾರತ ಮಾತುಕತೆಗೆ ಪ್ರತಿಭಟನೆ: ಟಿಬೆಟನ್ನರ ಪ್ರದರ್ಶನ, ಬಂಧನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 8:15 IST
Last Updated 1 ಮಾರ್ಚ್ 2012, 8:15 IST

ನವದೆಹಲಿ (ಪಿಟಿಐ): ಭಾರತ ಮತ್ತು ಚೀನಾ ಗಡಿ ಮಾತುಕತೆಯನ್ನು ಆಕ್ಷೇಪಿಸಿ ಮಹಿಳೆಯರೂ ಸೇರಿದಂತೆ ಟಿಬೆಟ್ ಪ್ರತಿಭಟನಕಾರರು ಗುರುವಾರ ಹೈದರಾಬಾದ್ ಭವನದ ಹೊರಗೆ ಪ್ರತಿಭಟನಾ ಪ್ರದರ್ಶನ ನಡೆಸಿ ಟಿಬೆಟ್ ಗೆ ಸ್ವಾತಂತ್ರ್ಯ ನೀಡುವುದಕ್ಕೆ ಮುನ್ನ ಚೀನಾ ಇಂತಹ ಮಾತುಕತೆ ನಡೆಸಬಾರದು ಎಂದು ಆಗ್ರಹಿಸಿದರು.

ಟಿಬೆಟ್ ಧ್ವಜಗಳು, ಚೀನಾ ವಿರೋಧಿ ಫಲಕಗಳನ್ನು ಹಿಡಿದುಕೊಂಡಿದ್ದ ಪ್ರತಿಭಟನಕಾರರು ಇಂಡಿಯಾ ಗೇಟ್ ಸಮೀಪದ ಹೈದರಾಬಾದ್ ಭವನದ ಎದುರು ಬೆಳಗಿನ ವೇಳೆಯಲ್ಲೇ ಜಮಾಯಿಸಿ ಘೋಷಣೆಗಳನ್ನು ಕೂಗಿದರು. ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಅವರು ಚೀನೀ ವಿದೇಶಾಂಗ ಸಚಿವ ಯಾಂಗ್ ಜೀಚಿ ಜೊತೆಗೆ ಇಲ್ಲೇ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿದ್ದಾರೆ.

ಪ್ರತಿಭಟನೆಯನ್ನು ಮೊದಲೇ ನಿರೀಕ್ಷಿಸಿ ಪ್ರದೇಶದಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಟಿಬೆಟ್ ಗೆ ಸ್ವಾತಂತ್ರ್ಯ ನೀಡಬೇಕು ಎಂದು ಘೋಷಣೆ ಕೂಗಿ ಪ್ರತಿಭಟನೆ ಆರಂಭಿಸುತ್ತಿದ್ದಂತೆಯೇ ಪ್ರದರ್ಶನಕಾರರನ್ನು ಪೊಲೀಸರು ಬಂಧಿಸಿದರು.

~ಮಹಿಳೆಯರೂ ಸೇರಿದಂತೆ ಪ್ರತಿಭಟನಕಾರರನ್ನು ನಾವು ಬಂಧಿಸಿದ್ದೇವೆ. ಅವರನ್ನು ಸಮೀಪದ ಸೆರೆಮನೆಗೆ ಒಯ್ಯಲಾಗಿದೆ~ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಟಿಬೆಟ್ ಗೆ ಸ್ವಾತಂತ್ರ್ಯ ನೀಡುವುದಕ್ಕೆ ಮೊದಲು ಚೀನಾ ಈ ವಿಚಾರವನ್ನು ಚರ್ಚಿಸುವಂತಿಲ್ಲ ಎಂದು ಪ್ರತಿಭಟನಕಾರರೊಬ್ಬರು ಹೇಳಿದರು. ~ನಮಗೆ ಸ್ವಾತಂತ್ರ್ಯ ಕೊಡುವ ಮುನ್ನ ಚೀನಾವು ಭಾರತದ ಜೊತೆಗೆ ಮಾತುಕತೆ ನಡೆಸುವುದು ನಿಂದನೀಯ~ ಎಂದು ಅವರು ನುಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.