ಬೀಜಿಂಗ್ (ಪಿಟಿಐ): ಪಾಕಿಸ್ತಾನ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರ ಭಾರತ ಭೇಟಿಯನ್ನು ಚೀನಾ ಸ್ವಾಗತಿಸಿದ್ದು, `ಅಣ್ವಸ್ತ್ರ ಹೊಂದಿದ ಎರಡು ನೆರೆಯ ದೇಶಗಳ ಸ್ನೇಹ ಉಭಯ ದೇಶಗಳಿಗೂ ಲಾಭ ತರುವುದಲ್ಲದೆ, ಪ್ರಾದೇಶಿಕ ಸ್ಥಿರತೆಗೂ ದಾರಿ ಮಾಡಿಕೊಡಲಿದೆ~ ಎಂದು ಹೇಳಿದೆ.
ಉಭಯ ದೇಶಗಳು ಹತ್ತಿರವಾಗುತ್ತಿರುವುದನ್ನು ಚೀನಾ ಸೇರಿದಂತೆ ಜಾಗತಿಕ ಸಮುದಾಯ ಸ್ವಾಗತಿಸುತ್ತದೆ. ಈ ವರ್ಷದ ಅಂತ್ಯದೊಳಗೆ ಭಾರತದಿಂದ ಆಮದಾಗುವ ವಸ್ತುಗಳ ಮೇಲಿನ ನಿರ್ಬಂಧ ತೆರವುಗೊಳಿಸುವುದಾಗಿ ಹೇಳಿರುವ ಪಾಕ್ ನಿರ್ಧಾರವೂ ಪ್ರಶಂಸಾರ್ಹ. ಉತ್ತಮ ದ್ವಿಪಕ್ಷೀಯ ಸಂಬಂಧ ಅವುಗಳ ಆರ್ಥಿಕತೆಯ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ. ಅಲ್ಲದೇ ಸೇನಾ ವೆಚ್ಚ ತಗ್ಗಿಸಲು ನೆರವು ನೀಡುತ್ತದೆ. ಇದರಿಂದ ಎರಡೂ ದೇಶಗಳು ಹಾಗೂ ಅಲ್ಲಿನ ಜನರಿಗೆ ಗಮನಾರ್ಹ ಲಾಭವಾಗುತ್ತದೆ ಎಂದು ಚೀನಾ ಅಭಿಪ್ರಾಯಪಟ್ಟಿದೆ.
`ಶಾಂತಿಗಾಗಿ ಪ್ರಾರ್ಥಿಸಿ~
ನವದೆಹಲಿ (ಪಿಟಿಐ): ಅಜ್ಮೇರ್ನ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದಲ್ಲಿ ಎರಡೂ ದೇಶಗಳ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸುವಂತೆ ಪಾಕಿಸ್ತಾನ ಅಧ್ಯಕ್ಷ ಆಸೀಫ್ಅಲಿ ಜರ್ದಾರಿ ಅವರನ್ನು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಲೋಕಸಭೆಯ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಭಾನುವಾರ ಇಲ್ಲಿ ಪ್ರಧಾನಿ ಏರ್ಪಡಿಸಿದ್ದ ಔತಣಕೂಟದಲ್ಲಿ ಕೋರಿದರು.
ಇದಕ್ಕೆ ಜರ್ದಾರಿ ಪ್ರತಿಕ್ರಿಯಿಸಿ, `ಹಾಗೆಯೇ ಮಾಡುವುದಾಗಿ ತಿಳಿಸಿದರು~ ಎಂದು ಟ್ವಿಟರ್ನಲ್ಲಿ ಸುಷ್ಮಾ ಬರೆದಿದ್ದಾರೆ. ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಪಾಕ್ ಆಂತರಿಕ ಭದ್ರತಾ ಸಚಿವ ರೆಹಮಾನ್ ಮಲಿಕ್, ಪಿಪಿಪಿ ಅಧ್ಯಕ್ಷ ಬಿಲಾವಲ್ ಭುಟ್ಟೊ ಜರ್ದಾರಿ ಈ ಸಂದರ್ಭದಲ್ಲಿ ಇದ್ದರು ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.