ಸಂತ ಕಬೀರ್ನಗರ, ಉತ್ತರ ಪ್ರದೇಶ (ಪಿಟಿಐ): `ಉತ್ತರ ಪ್ರದೇಶದ ಚುನಾವಣೆ ಬಳಿಕ ಕಾಂಗ್ರೆಸ್ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ~ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.
ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಏರ್ಪಡಬಹುದೆಂಬ ವದಂತಿಗಳಿಗೆ ತೆರೆ ಎಳೆಯುವ ಸಲುವಾಗಿ ರಾಹುಲ್ ಹೀಗೆ ಹೇಳಿದ್ದಾರೆ.
ಮೆಹದ್ವಾಲ್ ಪ್ರದೇಶದಲ್ಲಿ ಶನಿವಾರ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೋತ್ತರ ಮೈತ್ರಿಯನ್ನು ತಳ್ಳಿ ಹಾಕಿ 22 ವರ್ಷಗಳ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಪ್ರಬಲ ವಿಶ್ವಾಸ ವ್ಯಕ್ತಪಡಿಸಿದರು.
`ನಮ್ಮದು ಜನರೊಂದಿಗೆ ಮೈತ್ರಿ ಬಯಸುವ ಪಕ್ಷ. ನಿಮ್ಮ (ಜನರ) ಧ್ವನಿಯನ್ನು ಲಖನೌಗೆ ತಲುಪಿಸುತ್ತೇವೆ ಮತ್ತು ನಿಮ್ಮ ಹಣ ಪೋಲಾಗದಂತೆ ಆಡಳಿತ ನೀಡುತ್ತೇವೆ~ ಎಂದರು.
`ನೀವು ನನ್ನ ಅಜ್ಜಿ (ಇಂದಿರಾಗಾಂಧಿ)ಯನ್ನು ನಂಬಿದ್ದಿರಿ, ತಂದೆ (ರಾಜೀವ್ಗಾಂಧಿ) ಯನ್ನೂ ನಂಬಿದ್ದಿರಿ, ಈಗ ನನ್ನನ್ನೂ ನಂಬಿ~ ಎಂದು ಅವರು ಕೋರಿದರು.
ವಿರೋಧ ಪಕ್ಷಗಳ ಸುಳ್ಳು ಭರವಸೆಗಳ ಕುರಿತು ಟೀಕಿಸಿದ ಅವರು, `ನೀವು ಏನು ಕೇಳುತ್ತೀರೋ ಅದನ್ನೆಲ್ಲಾ ಕೊಡುವುದಾಗಿ ಅವರು ವಾಗ್ದಾನ ಮಾಡುತ್ತಾರೆ. ಒಂದು ವೇಳೆ ಆಕಾಶದ ಬಣ್ಣ ಬದಲಿಸಬೇಕೆಂದು ಅದಕ್ಕೂ ಒಪ್ಪುತ್ತಾರೆ~ ಎಂದು ಗೇಲಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.