ADVERTISEMENT

ಜಗನ್ ಜಾಮೀನು ಅರ್ಜಿ ವಜಾಗೊಳಿಸಿದ ಸಿಬಿಐ ಕೋರ್ಟ್

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 10:57 IST
Last Updated 4 ಡಿಸೆಂಬರ್ 2012, 10:57 IST

ಹೈದರಾಬಾದ್ (ಪಿಟಿಐ): ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ವೈಎಸ್‌ಆರ್ ಕಾಂಗ್ರೆಸ್ ಮುಖಂಡ ಜಗನ್ ಮೊಹನ್ ರೆಡ್ಡಿ ಅವರು ಜಾಮೀನು ಕೋರಿ ಎರಡನೇಯ ಬಾರಿಗೆ ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯವು ಮಂಗಳವಾರ ತಳ್ಳಿಹಾಕಿದೆ.

ಈ ಮೊದಲು ಜಾಮೀನು ಕೋರಿ ಜಗನ್ ಅವರು ಸಲ್ಲಿಸಿದ್ದ ಎರಡು ಪ್ರತ್ಯೇಕ ಜಾಮೀನು ಅರ್ಜಿಗಳನ್ನು  ಸಿಬಿಐ ನ್ಯಾಯಾಲಯವು ಪ್ರಕರಣದ ವಿಚಾರಣೆಯು ಬಾಕಿ ಇರುವುದರಿಂದ ಈ ಸಂದರ್ಭದಲ್ಲಿ ಜಾಮೀನು ನೀಡುವುದರಿಂದ ಸಾಕ್ಷ್ಯಗಳ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಹೇಳಿ ವಜಾಗೊಳಿಸಲಾಗಿತ್ತು.

ಸಿಬಿಐ ನ್ಯಾಯಾಲಯದ ಈ ಕ್ರಮವನ್ನು ಪ್ರಶ್ನಿಸಿ ಜಗನ್ ಅವರು ಆಂಧ್ರ ಪ್ರದೇಶ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆಗೆ ಡಿಸೆಂಬರ್ 11 ರಂದು ನಡೆಯಲಿದೆ.

ಜಗನ್ ಅವರು ಜಾಮೀನು ಕೋರಿ ಎರಡನೇಯ ಬಾರಿಗೆ ಅರ್ಜಿ ಸಲ್ಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಬಿಐನ ಉಪ ಕಾನೂನು ಸಲಹಾಧಿಕಾರಿ ಬಲ್ಲಾ ರವೀಂದ್ರನಾಥ್ ಅವರು ಜಗನ್ ಅವರ ವಿರುದ್ಧದ ಏಳು ಪ್ರಕರಣಗಳ ತನಿಖೆ ಪೂರ್ಣಗೊಳಿಸಲು ಕೇಂದ್ರ ತನಿಖಾ ತಂಡಕ್ಕೆ ಸುಪ್ರೀಂ ಕೋರ್ಟ್ ಯಾವುದೇ ರೀತಿಯ ಗಡುವು ನೀಡಿಲ್ಲ. ಸಿಬಿಐ ತನಿಖೆ ಪೂರ್ಣಗೊಳಿಸಿದ ನಂತರ ಬೇಕಾದರೆ ಜಗನ್ ಅವರು ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲಿ ಈ ಹಂತದಲ್ಲಿ ಅವರಿಗೆ ಜಾಮೀನು ನೀಡಬಾರದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT