ADVERTISEMENT

ಜನಪ್ರತಿನಿಧಿ ಹಿಂದಕ್ಕೆ ಕರೆಯಿಸುವುದು ಸಾಧುವಲ್ಲ: ಅಡ್ವಾಣಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 9:25 IST
Last Updated 21 ಅಕ್ಟೋಬರ್ 2011, 9:25 IST

ಕೋಲ್ಕತ್ತ (ಪಿಟಿಐ): ಚುನಾಯಿತ ಜನಪ್ರತಿನಿಧಿಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಹಕ್ಕು ಜನತೆಗಿರಬೇಕು ಎಂದು ಪ್ರತಿಪಾದಿಸುತ್ತಿರುವ ಅಣ್ಣಾ ಹಜಾರೆ ಅವರ ಬೇಡಿಕೆಗೆ ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಅವರು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಅದು ನಿರಂತರ ಅನಿಶ್ಚಿತತೆಗೆ ಕಾರಣವಾಗುತ್ತದೆ ಎಂದೂ ಅವರು ಹೇಳಿದ್ದಾರೆ .

ಅಣ್ಣಾ ಹಜಾರೆ ಅವರ ಬೇಡಿಕೆಯಾದ ಆಯ್ಕೆಯಾಗುವ ಜನಪತ್ರಿನಿಧಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಸ್ತಾವನೆ ಅನುಷ್ಠಾನಗೊಂಡರೆ ಭಾರತದಂಥ ದೊಡ್ಡ ರಾಷ್ಟ್ರದಲ್ಲಿ ನಿರಂತರ ಅನಿಶ್ಚಿತತೆ ಉಂಟಾಗುತ್ತದೆ. ಆದ್ದರಿಂದ ಈ ಬೇಡಿಕೆಗೆ ತಮ್ಮ ವಿರೋಧವಿದೆ ಎಂದು ಅವರು ಹೇಳಿದ್ದಾರೆ.

ಜನಲೋಕಪಾಲ್ ಮಸೂದೆ ಮಂಡನೆಗೆ ಆಗ್ರಹಿಸುತ್ತಾ ಭ್ರಷ್ಟಾಚಾರ ವಿರೋಧಿ ಆಂದೋಲನ ನಡೆಸುತ್ತಿರುವ ಅಣ್ಣಾ ಹಜಾರೆ ಅವರು, ನಮ್ಮ ದೇಶದಲ್ಲಿ  ಆಯ್ಕೆಯಾಗಿ ನಂತರ ಭ್ರಷ್ಟರಾಗುವ ಜನಪ್ರತಿನಿಧಿಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಹಕ್ಕೂ ಜನರಿಗಿರಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ.

ADVERTISEMENT

~ಪುಟ್ಟ ರಾಷ್ಟ್ರಗಳನ್ನು ಹೊರತುಪಡಿಸಿದರೆ ಬಹುತೇಕ ರಾಷ್ಟ್ರಗಳಲ್ಲಿ ಇಂಥ ಪ್ರಸ್ತಾವನೆಗೆ ಅಷ್ಟೇನು ಬೆಂಬಲ ಸಿಕ್ಕಿಲ್ಲ~ ಎಂದಿರುವ ಅಡ್ವಾಣಿ ಅವರು, ಚುನಾವಣಾ ಪ್ರಕ್ರಿಯೆಯಲ್ಲಿನ  ಸುಧಾರಣಾ ಕ್ರಮಗಳನ್ನು ಬೆಂಬಲಿಸುವೆ, ಮುಖ್ಯವಾಗಿ ಚುನಾವಣೆಯಲ್ಲಿ ಧನಬಲಕ್ಕೆ ಕಡಿವಾಣ ಹಾಕಬೇಕಿದೆ~ ಎಂದು ಹೇಳಿದರು.

ಕಳೆದ 1970ರಲ್ಲಿ ತಾವು ರಾಜ್ಯಸಭೆಯ ಸದಸ್ಯರಾಗಿದ್ದ ಹಾಗೂ ವಾಜಪೇಯಿ ಅವರು ಸಂಸತ್ ಸದಸ್ಯರಾಗಿದ್ದ ದಿನಗಳಿಂದಲೂ ತಮ್ಮ ಪಕ್ಷ ಚುನಾವಣೆ ಪ್ರಕ್ರಿಯೆಯಲ್ಲಿ ಸುಧಾರಣೆಗಳಾಗಬೇಕೆಂದು ಒತ್ತಾಯಿಸುತ್ತಲೇ ಇದೆ ಎಂದು ಅವರು ಹೇಳಿದರು.  

ಜನಪ್ರತಿನಿಧಿಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವುದರಿಂದ ದೇಶದಲ್ಲಿ ಅಭದ್ರತೆ ಮೂಡುವುದು ಎಂದು ಈಚೆಗೆ ಮುಖ್ಯ ಚುನಾವಣಾ ಆಯುಕ್ತರೂ ಅಭಿಪ್ರಾಯವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.