ಹೈದರಾಬಾದ್ (ಪಿಟಿಐ): ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಇತರ ಮೂವರ ನ್ಯಾಯಾಂಗ ಬಂಧನದ ಅವಧಿಯನ್ನು ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯವು ಜ. 25ರವರೆಗೆ ವಿಸ್ತರಿಸಿದೆ.
ಜನಾರ್ದನ ರೆಡ್ಡಿ ಮತ್ತು ಓಬಳಾಪುರಂ ಮೈನಿಂಗ್ ಕಂಪೆನಿ (ಒಎಂಸಿ) ವ್ಯವಸ್ಥಾಪಕ ನಿರ್ದೇಶಕರೂ ಆದ ಅವರ ಬಾವ ಬಿ.ವಿ. ಶ್ರೀನಿವಾಸ ರೆಡ್ಡಿ ಅವರನ್ನು ಕಳೆದ ಸೆಪ್ಟಂಬರ್ನಲ್ಲಿ ಬಂಧಿಸಿ, ಇಲ್ಲಿನ ಚಂಚಲಗಡ ಜೈಲಿನಲ್ಲಿ ಇರಿಸಲಾಗಿದೆ.
ರೆಡ್ಡಿದ್ವಯರೊಂದಿಗೆ ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ಆಂಧ್ರ ಪ್ರದೇಶದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಾಜಿ ನಿರ್ದೇಶಕ ವಿ.ಡಿ. ರಾಜಗೋಪಾಲ್ ಅವರನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಅವರ ಬಂಧನದ ಅವಧಿಯನ್ನೂ ನ್ಯಾಯಾಲಯ ವಿಸ್ತರಿಸಿದೆ.
ಇದೇ ಪ್ರಕರಣದಲ್ಲಿ ಬಂಧಿತರಾದ ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ವೈ. ಶ್ರೀಲಕ್ಷ್ಮಿ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಜ. 25ರವರೆಗೆ ವಿಸ್ತರಿಸಲಾಗಿದೆ.
ಜ. 23ರಂದು ವಿಚಾರಣೆಗೆ ನಿಗದಿಯಾಗಿದ್ದ ತಾವು ಸಲ್ಲಿಸಿದ ಜಾಮೀನು ಅರ್ಜಿಯನ್ನು ಪರಿಗಣಿಸುವಂತೆ ಜನಾರ್ದನ ರೆಡ್ಡಿ ನ್ಯಾಯಾಧೀಶರನ್ನು ಕೋರಿದರು. ತಾವು ದೇಶದಿಂದ ಪಲಾಯನಗೈಯುವುದಿಲ್ಲ, ಜಾಮೀನು ನೀಡಿ ಎಂದೂ ವಿನಂತಿಸಿಕೊಂಡರು.
ಸಿಬಿಐ ಡಿ. 3ರಂದು ಸಲ್ಲಿಸಿರುವ ಆರೋಪಪಟ್ಟಿಯನ್ನು ರೆಡ್ಡಿದ್ವಯರು ಮತ್ತು ರಾಜಗೋಪಾಲರಿಗೆ ನೀಡಲಾಯಿತು. ಭದ್ರತೆಯ ಕಾರಣದಿಂದಾಗಿ ಕೆಲವು ತಿಂಗಳಿಂದ ರೆಡ್ಡಿದ್ವಯರನ್ನು ನ್ಯಾಯಾಲಯಕ್ಕೆ ಖುದ್ದು ಹಾಜರು ಪಡಿಸಿರಲಿಲ್ಲ. ಆದರೆ, ಅವರ ನ್ಯಾಯಾಂಗ ಬಂಧನದ ಅವಧಿಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಸ್ತರಿಸಲಾಗುತ್ತಿತ್ತು.
ಈ ಮಧ್ಯೆ, ಎಪಿಐಐಸಿ- ಎಮ್ಮಾರ್ ಟೌನ್ಶಿಪ್ ಯೋಜನೆ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಉದ್ಯಮಿ ಕೊನೇರು ರಾಜೇಂದ್ರ ಪ್ರಸಾದ್ ಅವರ ನ್ಯಾಯಾಂಗ ವನ್ನು ಜ. 25ರವರೆಗೆ ವಿಸ್ತರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.