ADVERTISEMENT

ಜಮೀನು ವಾಪಸ್ಸಿಗೆ ಆಂಧ್ರ ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 10:15 IST
Last Updated 24 ಸೆಪ್ಟೆಂಬರ್ 2011, 10:15 IST

ಬಳ್ಳಾರಿ, (ಪಿಟಿಐ): ಓಬಳಾಪುರಂ ಗಣಿಗಾರಿಕಾ ಕಂಪೆನಿಗಾಗಿ ವಶಪಡಿಸಿಕೊಂಡಿರುವ ತಮ್ಮ ಜಮೀನುಗಳನ್ನು ಹಿಂದಿರುಗಿಸುವಂತೆ ಒತ್ತಾಯಿಸಿ ಆಂಧ್ರ ಪ್ರದೇಶದ ಸುಮಾರು ಒಂದು ಸಾವಿರ ರೈತರು, ಇಲ್ಲಿನ ರೆಡ್ಡಿ ದ್ವಯರ ಮಾಲಿಕತ್ವದ ಓಬಳಾಪುರಂ ಗಣಿಗಾರಿಕೆ ಕಂಪೆನಿಯ ಕಚೇರಿಯ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.

ಹೈದರಾಬಾದ್ ನ ಸಿಪಿಐ ಪಕ್ಷದ ಶಾಸಕ ಕೆ. ರಾಮಕೃಷ್ಣ ಅವರ ನೇತೃತ್ವದಲ್ಲಿ ಪ್ರತಿಭಟನಕಾರರು, ಇಲ್ಲಿಂದ 20 ಕಿ.ಮೀ ದೂರದ ಓಎಂಸಿ ಕಚೇರಿಗೆ ಸೇರಿದ ಮೂರು ಭದ್ರತಾ ಸಿಬ್ಬಂದಿಯ ಷೆಡ್ ಗಳನ್ನು ಕೆಡವಿ, ಜೊತೆಗೆ ಕಂಪೆನಿಯ ನಾಮಫಲಕಗಳನ್ನು ಕಿತ್ತೆಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಕಂಪೆನಿಯು ಪಕ್ಕದಲ್ಲಿನ ತಮ್ಮ  ಜಮೀನುಗಳನ್ನು ಒತ್ತುವರಿ ಮಾಡಿದೆ ಎಂದು ರೈತರು ದೂರಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಆಂಧ್ರ ಪ್ರದೇಶದಲ್ಲಿ ದಿ. ವೈ.ಎಸ್. ರಾಜಶೇಖರ ರೆಡ್ಡಿ  ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆಂಧ್ರ ಪ್ರದೇಶದ ಕೈಗಾರಿಕ ಅಭಿವೃದ್ದಿ ಮಂಡಳಿಯು, ಕರ್ನಾಟಕದ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರಿಗೆ ಸೇರಿದ್ದ ಓಎಂಸಿ ಸಂಸ್ಥೆಗೆ ಗಣಿಗಾರಿಕೆ  ನಡೆಸಲು 230 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು.

ADVERTISEMENT

ಓಬಳಾಪುರಂ ಗಣಿಗಾರಿಕೆ ಕಂಪೆನಿಯು ಸುಮಾರು 515 ಎಕರೆ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.

ಈಗ ಓಎಂಸಿಯಿಂದ ಗಣಿಗಾರಿಕೆ ನಡೆಸುವುದನ್ನು ನಿಷೇಧಿಸಲಾಗಿದ್ದು, ಹೀಗಾಗಿ ತಮ್ಮ ಜಮೀನನ್ನು ಹಿಂದಿರುಗಿಸಬೇಕೆಂಬುದು ಈ ರೈತರ ಹಕ್ಕೊತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.