ADVERTISEMENT

ಜಮ್ಮು - ಕಾಶ್ಮೀರದಲ್ಲಿ ಕರ್ಫ್ಯೂ, ಬಂದ್

ಉಗ್ರ ಅಫ್ಜಲ್ ಗುರು ಗಲ್ಲು ಶಿಕ್ಷೆ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2013, 7:16 IST
Last Updated 9 ಫೆಬ್ರುವರಿ 2013, 7:16 IST
ಶ್ರೀನಗರದಲ್ಲಿ ಶುಕ್ರವಾರ ಕಂಡುಬಂದ ದೃಶ್ಯ. -ಎಎಫ್‌ಪಿ ಚಿತ್ರ.
ಶ್ರೀನಗರದಲ್ಲಿ ಶುಕ್ರವಾರ ಕಂಡುಬಂದ ದೃಶ್ಯ. -ಎಎಫ್‌ಪಿ ಚಿತ್ರ.   

ಶ್ರೀನಗರ (ಐಎಎನ್‌ಎಸ್): ಉಗ್ರ ಅಫ್ಜಲ್ ಗುರು ಗಲ್ಲು ಶಿಕ್ಷೆ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆ ಪ್ರದೇಶದಾದ್ಯಂತ ಮುಂಜಾಗ್ರತೆ ಕ್ರಮವಾಗಿ ಭದ್ರತೆ ಹೆಚ್ಚಿಸಲಾಗಿದೆ. ಪ್ರಮುಖ ನಗರ, ಪಟ್ಟಣಗಳಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಹೆಚ್ಚಿನ ಭದ್ರತೆಗಾಗಿ ಪೊಲೀಸರು ಸೇರಿದಂತೆ ಅರೆ ಸೇನಾಪಡೆ, ಕೇಂದ್ರಿಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಗಲ್ಲು ಶಿಕ್ಷೆಯ ಸುದ್ದಿಯಿಂದ ಜನರು ಉದ್ರೇಕಗೊಳ್ಳುವುದನ್ನು ತಪ್ಪಿಸುವ ದೃಷ್ಟಿಯಿಂದ ಸ್ಥಳೀಯ ಕೇಬಲ್ ಆಪರೇಟರ್‌ಗಳಿಗೆ ತಕ್ಷಣದಿಂದಲೇ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಒಮರ್ ಅಬ್ದುಲಾ ಸೇರಿದಂತೆ ರಾಜ್ಯ ಕಿರಿಯ ಗೃಹ ಸಚಿವ ಸಯ್ಯದ್ ಕಿಚ್‌ಲೂ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ಅಶೋಕ್ ಪ್ರಸಾದ್ ಅವರು ಶ್ರೀನಗರದಲ್ಲಿ ಶನಿವಾರ ಬೆಳಿಗ್ಗೆ ಕಾನೂನು ಸುವ್ಯವಸ್ಥೆ ಹಾಗೂ ಪರಿಸ್ಥಿತಿ ಅವಲೋಕನ ನಡೆಸಿದರು.

ಮಿರ್‌ವೈಜ್ ಉಮರ್ ಫಾರೂಕ್ ಅವರ ಮಂದಗಾಮಿ ಹುರ್ರಿಯತ್ ಗುಂಪು ಅಫ್ಜಲ್ ಗುರು ಗಲ್ಲು ಶಿಕ್ಷೆಯ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಶೋಕಾಚರಣೆ ಘೋಷಿಸಿದೆ.

`ಅಫ್ಜಲ್ ಗುರು ಗಲ್ಲು ಶಿಕ್ಷೆ ಕುರಿತಂತೆ ನಾವು ನಾಲ್ಕು ದಿನಗಳ ಶೋಕಾಚರಣೆಗೆ ಘೋಷಿಸಿದ್ದೇವೆ. ತಕ್ಷಣವೇ ಆತನ ಮೃತದೇಹವನ್ನು ಆತನ ಸಂಬಂಧಿಗಳಿಗೆ ಹಸ್ತಾಂತರಿಸಬೇಕೆಂದು ನಾವು ಆಗ್ರಹಿಸುತ್ತೇವೆ' ಎಂದು ಶಹಿದ್ - ಉಲ್- ಇಸ್ಲಾಂ ಸಂಘಟನೆಯ ಕಾಯದರ್ಶಿಯೂ ಆಗಿರುವ ಮಿರ್‌ವೈಜ್ ತಿಳಿಸಿದರು.

ಉತ್ತರ ಕಾಶ್ಮೀರದ ಹೊರವಲಯದಲ್ಲಿ ಶ್ರೀನಗರದಿಂದ 52 ಕಿಮೀ. ದೂರದಲ್ಲಿರುವ ಸೂಪುರ ಪಟ್ಟಣ ಸಮೀಪದ ದೂವಾಭಾಗ್ ಗ್ರಾಮಕ್ಕೆ ಸೇರಿದ ಅಫ್ಜಲ್ ಗುರು ಪತ್ನಿ ತಬಾಸುಮ್ ಹಾಗೂ ಹದಿನಾಲ್ಕು ವಯಸ್ಸಿನ ಮಗ ಗಾಲಿಬ್ ಜತೆ ವಾಸಿಸುತ್ತಿದ್ದ.  ಆತನನ್ನು ಪೊಲೀಸರು ಸಂಸತ್ ಭವನದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 2001ರ ಡಿಸೆಂಬರ್ 13 ರಂದು ಬಂಧಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.