ಉದಕಮಂಡಲ, ತಮಿಳುನಾಡು: ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಆಗಾಗ್ಗೆ ಭೇಟಿ ನೀಡುತ್ತಿದ್ದ ಕೊಡನಾಡ್ನಲ್ಲಿರುವ ಬಂಗಲೆಯ ಕಾವಲುಗಾರನನ್ನು ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಬಂಗಲೆಗೆ ದಾಳಿ ಮಾಡಿದ ಗುಂಪೊಂದು ಒಳನುಗ್ಗಿ ಬೆಲೆಬಾಳುವ ವಸ್ತುಗಳನ್ನು ಮತ್ತು ಕೆಲವು ದಾಖಲೆಗಳನ್ನು ಕದ್ದೊಯ್ದಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಕಾವಲುಗಾರ ಗಾಯಗೊಂಡಿದ್ದಾರೆ.
ಚಹಾ ಎಸ್ಟೇಟ್ನ ಕಾರ್ಮಿಕರು ಬಂಗಲೆ ಸಮೀಪ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಭದ್ರತಾ ಸಿಬ್ಬಂದಿ ಓಂ ಬಹದ್ದೂರ್ ಮತ್ತು ಕಿಶೋರ್
ಬಹದ್ದೂರ್ ಅವರು ಕೊಳದ ಸಮೀಪ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕಾರ್ಮಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು.
ಓಂ ಬಹದ್ದೂರ್ ಮೃತಪಟ್ಟಿದ್ದರೆ, ಕಿಶೋರ್ ಬಹದ್ದೂರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಸುಕಿನ ವೇಳೆ ಎರಡು ವಾಹನಗಳಲ್ಲಿ ಸುಮಾರು 10 ಜನರ ಗುಂಪು ಈ ಪ್ರದೇಶ ಪ್ರವೇಶಿಸಿದ್ದನ್ನು ನೋಡಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ.
ದುಷ್ಕರ್ಮಿಗಳ ಪತ್ತೆಗೆ ಕರ್ನಾಟಕ ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ನೀಲಗಿರಿ ಜಿಲ್ಲೆಯ ಎಲ್ಲ ತಪಾಸಣಾ ನೆಲೆಗಳಲ್ಲಿ ತೀವ್ರ ನಿಗಾವಹಿಸಲಾಗಿದೆ.
ಈ ಬಂಗಲೆಯು ಜಯಲಿಲತಾ ಒಡೆತನಕ್ಕೆ ಸೇರಿದ್ದೇ ಅಥವಾ ಅಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.