ADVERTISEMENT

ಜಾತಿ ಗಣತಿ: ಜುಲೈನಲ್ಲಿ ಪೂರ್ಣ ಮಾಹಿತಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 19:30 IST
Last Updated 9 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಗುರುತಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾದ ಸಾಮಾಜಿಕ- ಆರ್ಥಿಕ ಜಾತಿ ಗಣತಿಯ (ಎಸ್‌ಇಸಿಸಿ) ಫಲಿತಾಂಶ ತಿಳಿದುಕೊಳ್ಳಲು ಜುಲೈ ಅಂತ್ಯದವರೆಗೆ ಕಾಯಬೇಕಿದೆ.

ದೇಶದ ಗ್ರಾಮೀಣ ಭಾಗದಲ್ಲಿ ಗಣತಿ ನಡೆಸುವ ಹೊಣೆ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮೇಲಿದ್ದು, ನಗರ ಪ್ರದೇಶಗಳಲ್ಲಿ ವಸತಿ ಹಾಗೂ ಬಡತನ ನಿರ್ಮೂಲನಾ ಸಚಿವಾಲಯ ಗಣತಿ ಕಾರ್ಯ ನಡೆಸುತ್ತಿದೆ.
ಈ ಗಣತಿಯನ್ನು ಕಳೆದ ವರ್ಷ ಜೂನ್‌ನಲ್ಲಿ ಆರಂಭಿಸಲಾಗಿತ್ತು. ಸಮೀಕ್ಷಾ ಕೆಲಸ ಹಲವು ರಾಜ್ಯಗಳಲ್ಲಿ ಕುಂಟುತ್ತ ಸಾಗಿದ್ದರೆ, ಮತ್ತೆ ಕೆಲ ರಾಜ್ಯಗಳಲ್ಲಿ ಗಣತಿ ಈವರೆಗೆ ಆರಂಭಗೊಂಡಿಲ್ಲ.

ಆಹಾರ ಭದ್ರತಾ ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ಗಣತಿಯ ಅಂಕಿ-ಅಂಶಗಳು ಸರ್ಕಾರಕ್ಕೆ ಮಹತ್ವದ್ದಾಗಿದ್ದು, ಕಳೆದ ತಿಂಗಳು ಆಹಾರ ಸಚಿವ ಕೆ.ವಿ. ಥಾಮಸ್ ಸಂಬಂಧಿಸಿದ ಇಲಾಖೆಗಳಿಗೆ ಗಣತಿಯ ವಿವರ ನೀಡುವಂತೆ ಪತ್ರ ಬರೆದಿದ್ದರು. ಆಹಾರ ಭದ್ರತಾ ಕಾಯ್ದೆಯ ಅನ್ವಯ ದೇಶದ ಗ್ರಾಮೀಣ ಭಾಗದ ಶೇ 75ರಷ್ಟು ಜನರಿಗೆ ಹಾಗೂ ನಗರ ಪ್ರದೇಶಗಳ ಶೇ 50 ರಷ್ಟು ಜನರಿಗೆ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ ಒದಗಿಸಲಾಗುತ್ತದೆ.

ಈ ಪತ್ರಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ಸ್ಪಂದಿಸಿದ್ದು, ಸಾಮಾಜಿಕ- ಆರ್ಥಿಕ ಜಾತಿ ಗಣತಿ ಜುಲೈ ಅಂತ್ಯದ ಹೊತ್ತಿಗೆ ಪೂರ್ಣಗೊಳ್ಳಬಹುದು ಎಂದಿದ್ದಾರೆ.

ಚುನಾವಣೆಗಳಿಂದ ಗಣತಿ ಕೆಲಸಕ್ಕೆ ಧಕ್ಕೆಯಾಗಿದೆ. ಒಡಿಶಾದ ಪ್ರವಾಹ ಪರಿಸ್ಥಿತಿಯೂ ಸಮೀಕ್ಷೆಗೆ ಅಡ್ಡಿಯಾಯಿತು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.