ADVERTISEMENT

ಜಾಮೀನು ಕೋರಿ ಮತ್ತೊಂದು ಅರ್ಜಿ ಹಾಕಿದ ಅಮರ್

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ವೋಟಿಗಾಗಿ ನೋಟು ಪ್ರಕರಣದ ಆರೋಪಿ ಅಮರ್ ಸಿಂಗ್ ಮಂಗಳವಾರ ತಮ್ಮನ್ನು ಬಂಧಿಸಿದ ಸ್ವಲ್ಪ ಸಮಯದಲ್ಲೇ ಮಧ್ಯಂತರ ಜಾಮೀನು ಕೋರಿ ಇಲ್ಲಿನ ನ್ಯಾಯಾಲಯವೊಂದರಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಸೆ.8ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ನಿರ್ದೇಶಿಸಿದೆ.

ಇದಕ್ಕೆ ಮುನ್ನ ಸ್ಥಳೀಯ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಸಂಗೀತಾ ಧಿಂಗ್ರ ಸೆಹಗಾಲ್ ಮುಂದೆ ಅವರು ತಮ್ಮ ಅನಾರೋಗ್ಯ ವಿವರಿಸಿದ್ದರು.

`ನನಗೆ ನಿಜವಾಗಿಯೂ ಅನಾರೋಗ್ಯವಿದೆ. ನಿಯಮಿತ ಡಯಾಲಿಸಿಸ್, ರಕ್ತಪರೀಕ್ಷೆಗೆ ಒಳಪಡಬೇಕು. ಸಾಕ್ಷಿದಾರರ ಮೇಲೆ ನಾನು ಯಾವ ಪ್ರಭಾವವನ್ನೂ ಬೀರುವುದಿಲ್ಲ. ಆರೋಪ ಸಾಬೀತಾಗುವ ತನಕ ಯಾರೂ ಅಪರಾಧಿಯಲ್ಲ ಎಂದು ಕಾನೂನು ತತ್ವವೇ ಹೇಳುತ್ತದೆ. ಮೂತ್ರಪಿಂಡ ಕಸಿ ಮಾಡಿಸಿಕೊಂಡವರು ಎಷ್ಟು ಎಚ್ಚರವಹಿಸಬೇಕು ಎಂದು ಯಾವ ವೈದ್ಯರನ್ನು ಬೇಕಾದರೂ ಕೇಳಿ~ ಎಂದು ಅಮರ್ ಪರಿಪರಿಯಾಗಿ ಕೋರಿದ್ದರು.

`ನನ್ನ ಸ್ಥಿತಿ ಸೂಕ್ಷ್ಮವಾಗಿದೆ. ಆದ್ದರಿಂದ ನನ್ನನ್ನೂ ಬೇರೆಯವರಂತೆಯೇ ನೋಡಬಾರದು. ಅನಾರೋಗ್ಯವನ್ನು ಪರಿಗಣಿಸಿ ಜಾಮೀನು ಕೋರಿಕೆ ಮಾನ್ಯಬೇಕು~ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.