ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ವಜ್ರಾಭರಣ ಉದ್ಯಮಿ ನೀರವ್ ಮೋದಿ ಒಡೆತನಕ್ಕೆ ಸೇರಿದ ₹ 523 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿದೆ.
ಅಕ್ರಮ ಹಣಕಾಸು ಚಟುವಟಿಕೆ ತಡೆ ಕಾಯ್ದೆ ಅನ್ವಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ತಾತ್ಕಾಲಿಕ ಆದೇಶ ಹೊರಡಿಸಲಾಗಿತ್ತು. ಇದರಂತೆ, ನೀರವ್ಗೆ ಸೇರಿದ ₹ 81.16 ಕೋಟಿ ಮೌಲ್ಯದ ಭವ್ಯವಾದ ಬಂಗಲೆ ಮತ್ತು ಮುಂಬೈನ ವರ್ಲಿ ಪ್ರದೇಶದಲ್ಲಿರುವ ₹ 15.45 ಕೋಟಿ ಮೌಲ್ಯದ ‘ಸಮುದ್ರ ಮಹಲ್’ ಅಪಾರ್ಟ್ಮೆಂಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ನೀರವ್ ಮೋದಿ ಮತ್ತು ಅವರ ಒಡೆತನದ ಕಂಪೆನಿಗೆ ಸೇರಿದ, ₹ 523.72 ಕೋಟಿ ಮೌಲ್ಯದ 21 ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಪೈಕಿ ಆರು ವಸತಿ ಆಸ್ತಿಗಳು, 10 ಕಚೇರಿಗಳು, ಪುಣೆಯಲ್ಲಿನ ಎರಡು ಫ್ಲ್ಯಾಟ್ಗಳು, ಒಂದು ಸೌರವಿದ್ಯುತ್ ಘಟಕ, ಅಲಿಬಾಗ್ನ ಫಾರ್ಮ್ಹೌಸ್ ಮತ್ತು ಅಹಮದಾನಗರ್ ಜಿಲ್ಲೆಯ ಕರ್ಜತ್ನಲ್ಲಿರುವ 135 ಎಕರೆ ಭೂಮಿ ಸೇರಿದೆ’ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಇದಕ್ಕೂ ಮುನ್ನ ಗೀತಾಂಜಲಿ ಗ್ರೂಪ್ ಉದ್ಯಮಿ ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿಗೆ ಸಂಬಂಧಿಸಿದ ₹ 100 ಕೋಟಿ ಮೌಲ್ಯದ ಮ್ಯೂಚುವಲ್ ಫಂಡ್ಗಳು ಮತ್ತು ಷೇರುಗಳನ್ನು ಜಾರಿ ನಿರ್ದೇಶನಾಲಯ ವಶಕ್ಕೆ ತೆಗೆದುಕೊಂಡಿದೆ.
ಪಿಎನ್ಬಿಗೆ ₹11,400 ಕೋಟಿ ವಂಚನೆ ಮಾಡಿರುವ ಪ್ರಕರಣದಲ್ಲಿ ವಜ್ರಾಭರಣ ಉದ್ಯಮಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಪ್ರಮುಖ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ...
* ಆಭರಣ ವ್ಯಾಪಾರ ಸಂಸ್ಥೆಯಿಂದ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ಗೆ ₹390 ಕೋಟಿ ವಂಚನೆ: ಸಿಬಿಐನಿಂದ ಪ್ರಕರಣ ದಾಖಲು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.