ಛಾತ್ರಾ(ಜಾರ್ಖಂಡ್): ಇಲ್ಲಿನ ಪರಸೌನಿ ಗ್ರಾಮದಲ್ಲಿ ಶುಕ್ರವಾರ 18 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಜೀವಂತವಾಗಿ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಆರೋಪಿಗಳನ್ನು ಬಂಧಿಸಲಾಗಿದೆ.
ಆದರೆ, ಪ್ರಮುಖ ಆರೋಪಿ ಧನು ಭುಯಿಯಾ ಇನ್ನೂ ಸೆರೆ ಸಿಕ್ಕಿಲ್ಲ. ಆರೋಪಿ ಹಾಗೂ ಆತನ ಐವರು ಸಹಚರರಿಗಾಗಿ ಶೋಧ ನಡೆಸಲಾಗುತ್ತಿದೆ. ಶೀಘ್ರವೇ ಎಲ್ಲರನ್ನೂ ಬಂಧಿಸಲಾಗುತ್ತದೆ ಎಂದು ಛಾತ್ರಾ ಪೊಲೀಸ್ ಆಯುಕ್ತ ಜಿತೇಂದ್ರಕುಮಾರ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಾರ್ಖಂಡ್ ಮುಖ್ಯಮಂತ್ರಿ ರಘುವರ್ ದಾಸ್ ಅವರು ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಕಿ ಹಚ್ಚಿದ್ದೇಕೆ?: ಯುವತಿ ಮೇಲೆ ಅತ್ಯಾಚಾರ ಎಸಗಿದ ಧನು ಭುಯಿಯಾ ಹಾಗೂ ಇತರ ಆರೋಪಿಗಳಿಗೆ ಗ್ರಾಮದ ಪಂಚಾಯ್ತಿ ಮುಖಂಡರು 100 ಬಸ್ಕಿ ಹೊಡೆಯುವಂತೆ ಆದೇಶಿಸಿದ್ದರು. ಪಂಚಾಯ್ತಿ ಆದೇಶ ಪಾಲಿಸದ ಆರೋಪಿ ಯುವತಿ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದ. ಆಗ ಯುವತಿ ಮೃತಪಟ್ಟಿದ್ದಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.