ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಹಾಗೂ ನೋಟು ಅಪಮೌಲ್ಯೀಕರಣ ಅತಿ ದೊಡ್ಡ ‘ಹಗರಣ’ಗಳು ಎಂದು ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
‘ನೋಟು ರದ್ದತಿ ಮತ್ತು ಜಿಎಸ್ಟಿ ಅತಿ ದೊಡ್ಡ ಹಗರಣಗಳಾಗಿವೆ. ನಾವು ಸಂತೋಷದಿಂದ ಜೈಲಿಗೆ ಹೋಗಲು ಸಿದ್ಧ, ಆದರೆ ತಲೆ ಬಾಗಲು ಸಾಧ್ಯವೇ ಇಲ್ಲ ’ಎನ್ನುವ ಮೂಲಕ ಸಂಸತ್ ಮುಂಗಾರು ಅಧಿವೇಶನದಲ್ಲಿ ಪ್ರಧಾನಿ ಮೋದಿ ಯೋಜನೆಗಳ ಕುರಿತು ಟೀಕಾ ಪ್ರಹಾರ ನಡೆಸುವ ಸೂಚನೆಯನ್ನು ಸಿಎಂ ಮಮತಾ ಬ್ಯಾನರ್ಜಿ ನೀಡಿದ್ದಾರೆ.
ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಶೋಷಣೆಯನ್ನು ವಿರೋಧಿಸಿ ರಾಷ್ಟ್ರಪತಿ ಅಭ್ಯರ್ಥಿ ಮೀರಾಕುಮಾರ್ ಅವರಿಗೆ ಮತ ನೀಡಿದ್ದೇವೆ. ಎಲ್ಲ ವಿರೋಧ ಪಕ್ಷಗಳೂ ಒಗ್ಗೂಡಲು ಸಕಾಲ ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ.
‘ಕೇಂದ್ರ ಸರ್ಕಾರವು ಭೂತಾನ್, ನೇಪಾಳ ಹಾಗೂ ಬಾಂಗ್ಲಾದೇಶಗಳ ಜತೆಗಿನ ಸಂಬಂಧವನ್ನು ಹಾಳು ಮಾಡಿದೆ. ಇದರಿಂದ ಸಂಕಷ್ಟಕ್ಕೆ ಒಳಗಾಗಿರುವವರು ನಾವು! ಗಡಿ ಭಾಗದಲ್ಲಿ ಮುಕ್ತ ಪ್ರದೇಶಕ್ಕೆ ದಾರಿ ಮಾಡಿರುವುದು ಏಕೆ? ರಾಷ್ಟ್ರೀಯ ತನಿಖಾ ದಳ(ಎನ್ಐಎ), ಗುಪ್ತಚರ ದಳಗಳು ಎಲ್ಲಿ? ಎಸ್ಎಸ್ಬಿ, ರಾ ಏನು ಮಾಡುತ್ತಿವೆ’ ಎಂದು ಪ್ರಶ್ನಿಸಿದ್ದಾರೆ.
ದೇಶದ ಹಿತದೃಷ್ಟಿಯಿಂದ ಬಿಜೆಪಿ ಯಾರೊಬ್ಬರೂ ಬೆಂಬಲಿಸ ಬಾರದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.