ಅಮೃತಸರ (ಪಿಟಿಐ): ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಪಾಲ್ಗೊಂಡಿದ್ದ ಚುನಾವಣಾ ಪ್ರಚಾರ ಮೆರವಣಿಗೆಯಲ್ಲಿ ಅನಿಲ ತುಂಬಿದ ಅನೇಕ ಬಲೂನುಗಳು ಏಕಕಾಲಕ್ಕೆ ಸ್ಫೋಟಗೊಂಡ ಕಾರಣ ಕೆಲಕಾಲ ಗೊಂದಲ ಹಾಗೂ ಆತಂಕಕ್ಕೆ ಕಾರಣವಾಯಿತು. ಮಂಗಳವಾರ ತೆರೆದ ವಾಹನದಲ್ಲಿ ಪ್ರಚಾರಕ್ಕಾಗಿ ಬಿಜೆಪಿ–ಶಿರೋಮಣಿ ಅಕಾಲಿದಳ ಕಾರ್ಯಕರ್ತರೊಂದಿಗೆ ಜೇಟ್ಲಿ ತೆರೆದ ವಾಹನದಲ್ಲಿ ತೆರಳುತ್ತಿದ್ದಾಗ ಅನಿಲ ತುಂಬಿದ್ದ ಬಲೂನ್ಗಳು ಸಿಡಿದವು.
ಜೇಟ್ಲಿ ಯಾವುದೇ ಹೆಚ್ಚಿನ ಅಪಾಯವಿಲ್ಲದೇ ಪಾರಾಗಿದ್ದು, ಪಕ್ಕದಲ್ಲಿದ್ದ ಪಕ್ಷದ ಇತರ ನಾಯಕರು ಮತ್ತು ಕೆಲವು ಕಾರ್ಯಕರ್ತರಿಗೆ ಚಿಕ್ಕಪುಟ್ಟ ಸುಟ್ಟ ಗಾಯಗಳಾಗಿವೆ. ಇದೇ ಮೊದಲ ಬಾರಿಗೆ ಸಾರ್ವಜನಿಕ ಚುನಾವಣೆ ಎದುರಿಸುತ್ತಿರುವ ಜೇಟ್ಲಿ ಘಟನೆಯ ನಂತರ ಅವರು ಸ್ವರ್ಣ ಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಸತತ ಮೂರು ಬಾರಿ ನವಜೋತ್ ಸಿಂಗ್ ಸಿಧು ಪ್ರತಿನಿಧಿಸಿದ್ದ ಅಮೃತಸರ ಲೋಕಸಭಾ ಕ್ಷೇತ್ರದಿಂದ ಈ ಬಾರಿ ರಾಜ್ಯಸಭಾ ಸದಸ್ಯ ಅರುಣ್ ಜೇಟ್ಲಿ ಸ್ಪರ್ಧಿಸಿದ್ದಾರೆ. ಜೇಟ್ಲಿ ಜತೆ ನವಜೋತ್ ಸಿಂಗ್ ಸಿಧು, ಮತ್ತು ಸಿಧು ಪತ್ನಿ ಹಾಗೂ ಶಾಸಕಿ ನವಜೋತ್ ಕೌರ್ ಕೂಡಾ ಇದ್ದರು.
ಬಲೂನುಗಳು ಸಿಡಿದ ಘಟನೆಗೆ ಸಂಬಂಧಿಸಿಂತೆ ನಿಖರವಾದ ಮಾಹಿತಿ ದೊರೆತಿಲ್ಲ. ಅತಿಯಾದ ಬಿಸಿಲಿನ ಝಳ ಅಥವಾ ಪಟಾಕಿಗಳು ತಾಕಿ ಸ್ಫೋಟಿಸಿರಬಹುದು ಎಂದು ಶಂಕಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.